ಮೂಡಿಗೆರೆ: ಬಾಳೂರು ಎಸ್ಟೇಟ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ‘30 ಮನೆಗಳಿರುವ ಬಾಳೂರು ಎಸ್ಟೇಟ್ ಗ್ರಾಮದಲ್ಲಿ ಹಲವು ತಿಂಗಳಿ ನಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಬರ ಪರಿಹಾರ ನಿಧಿಯಿಂದ ಗ್ರಾಮಕ್ಕೆ ಕೊಳವೆ ಬಾವಿ ನಿರ್ಮಿ ಸಲು ಮಂಜೂರಾತಿ ನೀಡಲಾಗಿತ್ತು.
ಗ್ರಾಮದ ಹೇಮಾವತಿ ಕೆರೆಯ ಬಳಿ ಸರ್ಕಾರಿ ಜಾಗದಲ್ಲಿ ಕೊಳವೆ ಬಾವಿ ನಿರ್ಮಿಸಲು ಜಾಗ ಗುರುತಿಸಿ, ಕೆಲವು ದಿನಗಳ ಹಿಂದೆ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾದಾಗ, ಗ್ರಾಮದ ಸುರೇಶ್ ಎಂಬವರು ಕೊಳವೆಬಾವಿ ನಿರ್ಮಾಣಕ್ಕೆ ಅಡ್ಡಿಪಡಿಸಿದರು.
ಅಧಿಕಾರಿಗಳು ಹಾಗೂ ಕೊಳವೆ ಬಾವಿ ನಿರ್ಮಿಸಲು ಬಂದ ಸಿಬ್ಬಂದಿ ಯನ್ನು, ಪ್ರಶ್ನಿಸಿದ ಗ್ರಾಮಸ್ಥರನ್ನು ನಿಂದಿಸಿ ವಾಪಸ್ ಕಳುಹಿಸಿದರು. ‘ಘಟನೆಗೆ ಸಂಬಂಧಿಸಿ ಗ್ರಾಮಸ್ಥರೆಲ್ಲಾ ತೆರಳಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಕೊಳವೆ ಬಾವಿ ನಿರ್ಮಾಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬರೇ ತಮ್ಮ ಜಮೀನಿನಲ್ಲಿ 9 ಕೊಳವೆಬಾವಿಗಳನ್ನು ನಿರ್ಮಿಸಿದ್ದಾರೆ’ ಎಂದು ಸೋಮವಾರ ಸಭೆ ಸೇರಿದ್ದ ಗ್ರಾಮಸ್ಥರು ದೂರಿದರು.
ಇದೀಗ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಎರಡು ಕಿಲೋ ಮೀಟರ್ಗೂ ಹೆಚ್ಚು ದೂರ ನಡೆದು ನೀರು ತರಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಕೂಲಿಕಾರ್ಮಿಕರೇ ಹೆಚ್ಚಾಗಿರುವ ಬಾಳೂರು ಎಸ್ಟೇಟ್ ಗ್ರಾಮದಲ್ಲಿ ದಿನವಿಡೀ ದುಡಿದು ಬರುವ ಜನರು ರಾತ್ರಿಯಾಗುತ್ತಿದ್ದಂತೆ ಕೊಡ ಗಳನ್ನು ಹಿಡಿದು ನೀರಿಗಾಗಿ ಅಲೆಯಬೇ ಕಾದ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಗ್ರಾಮಕ್ಕೆ ಕೊಳವೆ ಬಾವಿ ನಿರ್ಮಿಸಿ ಕುಡಿಯುವ ನೀರು ಪೂರೈಸದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ, ಲಾರೆನ್ಸ್, ಮೇರಿ ಡಿಸೋಜಾ, ಲಿಲ್ಲಿ ಡಿಸೋಜ, ರಮೇಶ, ಮಂಜುಳ, ಸವಿತಾ, ಸುಂದರ, ಮುತ್ತಪ್ಪ, ಜಯಂತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.