ಚಿಕ್ಕಮಗಳೂರು: ‘ದೇಶದಲ್ಲಿ ಹಿಮಾಲಯದಿಂದ ಕನ್ಯಾಕು ಮಾರಿಯವರೆಗೆ ಹಿಂದೂ ಸಂಸ್ಕೃತಿಯ ಇದೇ ನೆಲೆಯಲ್ಲಿ ಪಸರಿಸಿದೆ. ಸೇವೆ ಮತ್ತು ತ್ಯಾಗವೇ ದೇಶದ ಸಂಸ್ಕೃತಿ’ ಎಂದು ಆರ್ಎಸ್ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಬಸವನಹಳ್ಳಿ ಮಹಿಳಾಶ್ರಮ ಶಾಲೆ ಆವರಣದಲ್ಲಿ ಭಾನುವಾರ ಆರ್ಎಸ್ಎಸ್ ಮತ್ತು ವಿಎಚ್ಪಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸೇವಾ ಮತ್ತು ಸಂಸ್ಕೃತಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸೇವೆ ಎನ್ನುವುದು ಒಂದು ಮಾನಸಿಕತೆ. ಅದು ಕೊಟ್ಟು ಕೊಂಡುಕೊ ಳ್ಳುವಂತದ್ದಲ್ಲ. ಇನ್ನೊಬ್ಬರನ್ನು ಮೆಚ್ಚಿಸ ಲಿಕ್ಕೂ ಅಲ್ಲ. ಸೇವೆ ಹಿಂದೂ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ಸೇವೆಗೆ ಪ್ರತಿಫಲಾಪೇಕ್ಷೆ ಇರಬಾರದು. ಮರದ ಹಣ್ಣು, ನದಿಯ ನೀರು, ಹಸುವಿನ ಹಾಲು ತನಗಾಗಿ ಬಯಸಿದ್ದಲ್ಲ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇವೆ ಮೂಲಕ ಪರಿವರ್ತನೆ ತರುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಸುಮಾರು 1.60 ಲಕ್ಷ ಸೇವಾ ಚಟುವಟಿಕೆಗಳು, ದಕ್ಷಿಣ ಪ್ರಾಂತದಲ್ಲಿ 8 ಸಾವಿರ ಚಟುವಟಿಕೆಗಳು ನಡೆಯುತ್ತಿವೆ. ಪ್ರಪಂಚದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಸೇವಾ ಚಟುವಟಿಕೆಯನ್ನು ಯಾವ ಸಂಸ್ಥೆಯೂ ನಡೆಸುತ್ತಿಲ್ಲ. ಸಂಘದ ಕೇಶವ ಸೇವಾ ಸಮಿತಿ ಬೆಂಗಳೂರಿನ 450 ಕೊಳೆಗೇರಿಗಳಲ್ಲಿ ಸೇವಾ ಚಟುವಟಿಕೆ ನಡೆಸುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಮಂಗಳವಾದ್ಯದೊಂದಿಗೆ ನಡೆದ ಸಾಂಸ್ಕೃತಿಕ ಶೋಭಾ ಯಾತ್ರೆ ನಡೆಯಿತು. ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಕಲಾ ತಂಡಗಳು ಕಣ್ಮನ ಸೆಳೆದವು. ಕೇಸರಿ ವಸ್ತ್ರಧರಿಸಿದ್ದ ಪುಟಾಣಿಗಳು ಗಮನ ಸೆಳೆದರು. ಪೂರ್ಣಕುಂಭ ಹೊತ್ತು ಸಾಗಿದ ಮಹಿಳೆಯರು ಮೆರವಣಿಗೆಗೆ ಧಾರ್ಮಿಕ ಮೆರುಗು ನೀಡಿದರು.
ವೀರಗಾಸೆ, ಡೊಳ್ಳು ಮತ್ತು ಚಂಡೆ ಕಲಾವಿದರು ಸಾಂಸ್ಕೃತಿಕ ಮೆರುಗು ನೀಡಿದರು. ಧರ್ಮಸ್ಥಳದ ಕಲ್ಮಂಜ ಸಂಗಮಶ್ರೀ ಸಂಘಟನೆಯ ಯುವಕರು ಕೃಷಿ ಬದುಕು ಬಿಂಬಿಸುವಂತೆ ಮೈಗೆ ಮಣ್ಣು ಮೆತ್ತಿಕೊಂಡು ಪ್ರಸ್ತುತಪಡಿಸಿದ ಸ್ತಬ್ಧಚಿತ್ರ ನೆಲದ ಸೊಗಡು ಬಿಂಬಿಸುವ ಜತೆಗೆ, ನೋಡುಗರ ಕಣ್ಮನ ಸೆಳೆಯಿತು.
ಶಾಸಕ ಸಿ.ಟಿ.ರವಿ, ಆರ್ಎಸ್ಎಸ್ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ, ನಗರ ಸಂಘಚಾಲಕ ಸ.ಗಿರಿಜಾಶಂಕರ್ ಇನ್ನಿತರರು ಗೋ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ವಿಶ್ವಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ಮನೋಹರ್, ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ ರಾಮಸ್ವಾಮಿ ಇದ್ದರು.
* ‘ದೇಶದ ತರುಣರಿಗೆ ಹಿಂದೂ ಸಂಸ್ಕೃತಿ ನಿಜಾರ್ಥದಲ್ಲಿ ಪರಿಚಯಿಸಲು ಆಗಿಲ್ಲ. ಸರ್ವೆಜನೋ ಸುಖಿನೋ ಭವಂತು ಎಂದು ಹೇಳಿ ಜಗತ್ತಿಗೇ ಜ್ಞಾನ ಕೊಟ್ಟಿದ್ದು ಹಿಂದೂ ಸಂಸ್ಕೃತಿ’
ತಿಪ್ಪೇಸ್ವಾಮಿ, ಆರ್ಎಸ್ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.