ADVERTISEMENT

‘ನಿವೃತ್ತ ಸೈನಿಕರಿಗೆ ನೆಮ್ಮ ದಿಯ ಬದುಕು ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:51 IST
Last Updated 25 ಅಕ್ಟೋಬರ್ 2016, 9:51 IST

ಕೊಪ್ಪ: ಅಪಾಯವನ್ನು ಬೆನ್ನ ಹಿಂದೆಯೇ ಕಟ್ಟಿಕೊಂಡು ದೇಶದ ಗಡಿ ಕಾಯುವ ಸೈನಿಕರ ಬದುಕು ಸಾಹಸದಿಂದ ಕೂಡಿದೆ ಎಂದು ವಾಯು ಸೇನೆಯ ನಿವೃತ್ತ ವಿಂಗ್ ಕಮಾಂಡರ್ ವೈ.ಎಸ್.ವಿ. ಮೂರ್ತಿ ತಿಳಿಸಿದರು.

ಪಟ್ಟಣದ ಪುರಭವನದಲ್ಲಿ ಭಾನು ವಾರ ನಡೆದ ‘ಶೃಂಕೊನ’ ಮಾಜಿ ಸೈನಿಕರ ಸಂಘದ ವಾರ್ಷಿಕ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಮಾಚ್ಛಾದಿತ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದು ಅತೀವ ಕಷ್ಟಕರ. ಆದರೂ ಅದನ್ನು ಲೆಕ್ಕಿಸದೆ, ವೈಯಕ್ತಿಕ ಬದುಕಿನ ಸುಖ ಸಂತೋಷ ಗಳನ್ನು ತ್ಯಜಿಸಿ ದೇಶರಕ್ಷಣೆಯಲ್ಲಿ ತೊಡಗುವ ಸೈನಿಕರಿಗೆ ನಿವೃತ್ತಿಯ ಬಳಿಕವಾದರೂ ನೆಮ್ಮದಿಯ ಜೀವನ ನಡೆಸಲು ಸಮಾಜ, ಸರ್ಕಾರದ ಸಹಕಾರ ಅಗತ್ಯ’ ಎಂದು ಅವರು ತಿಳಿಸಿದರು.

ಈ ಭಾಗದ ನಿವೃತ್ತ ಸೈನಿಕರನ್ನು ಸಂಘಟಿಸುತ್ತಿರುವ ‘ಶೃಂಕೊನ’ ಮಾಜಿ ಸೈನಿಕರ ಸಂಘದ ಕಾರ್ಯ ಶ್ಲಾಘನೀಯ. ಸಂಘದ ಕಾರ್ಯಕ್ರಮಗಳಲ್ಲಿ ಎಲ್ಲಾ ಮಾಜಿ ಸೈನಿಕರ ಕುಟುಂಬ ಸದಸ್ಯರು ಪಾಲ್ಗೊಳ್ಳಬೇಕು. ಇದರಿಂದ ನಮ್ಮ ನಡುವೆ ಪರಸ್ಪರ ಪರಿಚಯ, ವಿಶ್ವಾಸ ಬೆಳೆದು, ಬಾಂಧವ್ಯ ವೃದ್ಧಿಸುತ್ತದೆ.

ಸಂಘಟಿತ ಪ್ರಯತ್ನದ ಮೂಲಕ ಸರ್ಕಾರದ ಸೌಲಭ್ಯ ಪಡೆದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ’ ಎಂದ ಅವರು, ಸರ್ಕಾರದ ಇ.ಸಿ.ಎಚ್. ಎಸ್. ಸೌಲಭ್ಯವನ್ನು ಪ್ರತಿಯೊಬ್ಬ ಮಾಜಿ ಸೈನಿಕರೂ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಿವೃತ್ತ ಕ್ಯಾಪ್ಟನ್ ಎನ್.ಎ. ಗೋಪಾಲ್ ಮಾತನಾಡಿ, ‘ಶೃಂಗೇರಿ, ಕೊಪ್ಪ, ನರಸಿಂ ಹರಾಜಪುರ ತಾಲ್ಲೂಕು ವ್ಯಾಪ್ತಿಯ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ‘ಶೃಂಕೊನ’ ಸಂಘದ ವತಿಯಿಂದ ಹಲವಾರು ಜನಪರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳ ಲಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರಗಳ ವಿರುದ್ಧವೂ ಹೋರಾಟ ನಡೆಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಿದ್ಧರಾಗಬೇಕು’ ಎಂದು ತಿಳಿಸಿದರು.

ನಿಕಟಪೂರ್ವ ಉಪಾಧ್ಯಕ್ಷ ಡೇವಿಸ್, ಕಾರ್ಯದರ್ಶಿ ಯತಿರಾಜ್, ಸಹ ಕಾರ್ಯದರ್ಶಿ ಜಾನ್ ಪೆರಿಸ್, ಖಜಾಂಚಿ ರಮೇಶ್ ಶಾಸ್ತ್ರಿ, ನಿರ್ದೇಶಕರಾದ ಎನ್.ಕೆ. ವಿಜಯ್, ಯತಿರಾಜ್ ಡಿ.ಆರ್, ಕಳಸಪ್ಪ ಟಿ.ಜಿ. ಯತಿರಾಜ್ ಬಿ.ಟಿ., ಜೋಸೆಫ್, ವಿಲ್ಸನ್ ಮುಂತಾದವರಿದ್ದರು.

ರಿನ್ಸಿ ಮತ್ತು ಜೋಮಿ ಪ್ರಾರ್ಥನೆ ಹಾಡಿದರು. ಸುಗಮ್ ಭಕ್ತಿಗೀತೆ ಹಾಡಿದರು. ಜೋಸೆಫ್ ಸ್ವಾಗತಿಸಿದರು. ಡೇವಿಸ್ ವಂದಿಸಿದರು. ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.