ನರಸಿಂಹರಾಜಪುರ: ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಲೈಂಗಿಕ ಶಿಕ್ಷಣವನ್ನು ನೀಡುವತ್ತ ಗಮನಹರಿಸಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಸಲಹೆ ನೀಡಿದರು.
ಪಟ್ಟಣದ ಸೇಂಟ್ ನೋರ್ಬಿ ಸ್ಪೇಷಲ್ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರದಲ್ಲಿ ‘ಮಕ್ಕಳಿಗೆ ಲೈಂಗಿಕ ಶೋಷಣೆ ತಡೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
'ಪ್ರಬುದ್ಧ ವ್ಯಕ್ತಿಯಿಂದ ಅಪ್ರಾಪ್ತ ಮಗುವಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮಕ್ಕಳ ಲೈಂಗಿಕ ಶೋಷಣೆಯಾಗಿದ್ದು, ಮನುಷ್ಯ ಎಚ್ಚರ ತಪ್ಪಿದಾಗ ಅನೇಕ ತಪ್ಪುಗಳನ್ನು ಮಾಡುತ್ತಾನೆ. ಎಚ್ಚರ ತಪ್ಪದಂತೆ ಬದುಕುವುದು ಅವಶ್ಯ' ಎಂದರು.
‘ಮನೆಯಿಂದ ಹೊರ ಹೋದ ಮಗು ಸುರಕ್ಷಿತವಾಗಿ ಹಿಂದಿರುಗದಿರುವ ಸನ್ನಿವೇಶ ಸಮಾಜದಲ್ಲಿ ನಿರ್ಮಾಣವಾಗಿದ್ದು, ಯುವಕರು, ಶಿಕ್ಷಕರು, ವಯಸ್ಕರಿಂದ ಹೆಣ್ಣು ಮಕ್ಕಳು ಲೈಂಗಿಕ ಶೋಷಣೆಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಶೋಷಣೆ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯ’ಎಂದರು.
ಮಕ್ಕಳು ಲೈಂಗಿಕ ಶೋಷಣೆಗೊಳಗಾದರೆ ಮಾನಸಿಕ ಬೆಳವಣಿಗೆ ಕುಂಠಿತಗೊಂಡು ಕಾಯಿಲೆಗೆ ತುತ್ತಾಗಲಿದ್ದು, ಮಗು ಯಾವುದೇ ಸಂಬಂಧಿಕರ ಮನೆಗೆ ಹೋಗಲು ತಿರಸ್ಕರಿಸುವುದು, ಸ್ನಾನ ಮಾಡಿಸಲು ಬಟ್ಟೆ ತೆಗೆಯಲು ಹೇಳಿದರೆ ಮೂರ್ಛೆ ಹೋಗುವುದು, ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು, ಏಕಾಂಗಿಯಾಗಿರುವುದು, ವಾಂತಿ, ತಲೆನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಎಂದರು.
ಲೈಂಗಿಕ ಶೋಷಣೆಗೊಳಗಾದ ಮಕ್ಕಳನ್ನು ಸಂರಕ್ಷಿಸಿ ಆಪ್ತಸಮಾಲೋಚನೆ ನೀಡುವ ಕಾರ್ಯವನ್ನು ಸೇಂಟ್ ನೋಬರ್ಟ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಸಂಪನ್ಮೂಲ ವ್ಯಕ್ತಿ ಪ್ರತಿಧ್ವನಿ ಪ್ರದೀಪ್, ವಿದ್ಯಾರ್ಥಿಗಳಿಗೆ ಲೈಂಗಿಕ ಶೋಷಣೆಯಿಂದ ಯಾವ ರೀತಿ ತಪ್ಪಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.
ಆಪ್ತ ಸಮಾಲೋಚಕಿ ಸುಶ್ಮಿತಾ ಶೆಟ್ಟಿ , ಶಿಬಿರಾರ್ಥಿಗಳು ಪಾಲ್ಗೊಂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.