ಕೊಪ್ಪ: 18 ವರ್ಷಗಳ ಸುದೀರ್ಘ ಅವಧಿಯಲ್ಲಿ ತೊಡಗಿದ್ದ ನಕ್ಸಲ್ ಚಳುವಳಿಯಿಂದ ಹೊರಬಂದು ಇತ್ತೀಚೆಗಷ್ಟೇ ಸಮಾಜದ ಮುಖ್ಯವಾಹಿನಿಗೆ ಮರಳಿದ ತಾಲ್ಲೂಕಿನ ಕಾಚ್ಕಲ್ ಸಮೀಪದ ನೀಲುಗುಳಿ ಪದ್ಮನಾಭ ಅವರು ನ್ಯಾಯಾಂಗ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡು ನೀಲುಗುಳಿಯ ತಮ್ಮ ಮನೆಗೆ ಮರಳಿದ್ದಾರೆ.
ಶುಕ್ರವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಭೂಗತ ಹೋರಾಟದಿಂದ ಹೊರ ಬಂದಿದ್ದರೂ ಮುಂದಿನ ದಿನಗಳಲ್ಲಿ ಸಾಮಾಜಿಕ ಅನ್ಯಾಯ, ಶೋಷಣೆ ವಿರುದ್ಧ ಸಾರ್ವಜನಿಕರೊಂದಿಗೆ ಸೇರಿ ಪ್ರಜಾತಾಂತ್ರಿಕ ಹೋರಾಟಗಳಲ್ಲಿ, ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ. ಈವರೆಗಿನ ಭೂಗತ ಹೋರಾಟದ ಅನುಭವ, ಸಾಧನೆಗಳು, ಮುಖ್ಯವಾಹಿನಿಗೆ ಮರಳಲು ಕಾರಣವಾದ ಅಂಶಗಳ ಬಗ್ಗೆ ಶೀಘ್ರವೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ’ ಎಂದರು.
ಗೌರಿ ಲಂಕೇಶ್ ಹತ್ಯೆಗೆ ಖಂಡನೆ: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿದ್ದನ್ನು ಅವರು ತೀವ್ರವಾಗಿ ಖಂಡಿಸಿದರು. ಪತ್ರಕರ್ತರಾಗಿ, ಪ್ರಗತಿಪರ ಹೋರಾಟಗಾರರಾಗಿ ಸಮಾಜದ ತಳ ಸಮುದಾಯಗಳ ಏಳಿಗೆಗೆ, ಅಸಹಾಯಕರ, ಶೋಷಿತರ ಪರವಾಗಿ ದಿಟ್ಟ ಹೋರಾಟ ನಡೆಸಿದ ಗೌರಿ ಲಂಕೇಶ್ ನಿಧನ ಅತೀವ ನೋವು ತಂದಿದೆ.
ಅವರನ್ನು ದೈಹಿಕವಾಗಿ ಹತ್ಯೆ ಮಾಡಿದವರಿಗೆ ಅವರ ವಿಚಾರಗಳನ್ನು ಸಾಯಿಸಲು ಸಾಧ್ಯವಾಗದು. ಗೌರಿ ಲಂಕೇಶರ ಆಶಯಗಳನ್ನು ಈಡೇರಿಸಲು ಪ್ರಗತಿಪರ ಮನಸ್ಸುಗಳು ಮತ್ತಷ್ಟು ಹುಮ್ಮನಸ್ಸಿನಿಂದ ಗಟ್ಟಿದನಿಯಿಂದ ಹೋರಾಟದಲ್ಲಿ ತೊಡಗಲಿವೆ’ ಎಂದರು.
ಗೌರಿ ಲಂಕೇಶ್ ಅವರನ್ನು ವಿರೋಧಿಸುತ್ತಿದ್ದ ನಕ್ಸಲರ ತಂಡವೇ ಹತ್ಯೆ ಮಾಡಿದೆ ಎಂದು ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರಶ್ನಿಸಿದಾಗ ‘ಅದು ಸಂಪೂರ್ಣ ಸುಳ್ಳು. ಕೆಲವು ಮಾಧ್ಯಮಗಳು ಪೂರ್ವಗ್ರಹ ಪೀಡಿತವಾಗಿ ತನಿಖೆಯ ದಿಕ್ಕು ತಪ್ಪಿಸಲು ಈ ರೀತಿಯ ಅಪಪ್ರಚಾರದಲ್ಲಿ ತೊಡಗಿವೆ. ಆಕೆಯ ಹತ್ಯೆಯಲ್ಲಿ ಕೋಮುವಾದಿ ಸಂಘಟನೆಗಳ ಕೈವಾಡವಿರುವ ಶಂಕೆಯಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.