ADVERTISEMENT

ಮಲೆನಾಡಿನಲ್ಲಿ ವಾಣಿಜ್ಯ ಕೃಷಿಗೆ ಆಸರೆಯಾಗುವ ಕೆರೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:58 IST
Last Updated 22 ಮಾರ್ಚ್ 2017, 6:58 IST
ಕಳಸ ಸಮೀಪದ ಭತ್ತದ ಗದ್ದೆಯಲ್ಲಿ ಬೆಳೆಗಾರ ಕೆ.ಎನ್‌.ಭೋಜೇಗೌಡ ನಿರ್ವಹಣೆ ಮಾಡಿರುವ ಕೆರೆ.
ಕಳಸ ಸಮೀಪದ ಭತ್ತದ ಗದ್ದೆಯಲ್ಲಿ ಬೆಳೆಗಾರ ಕೆ.ಎನ್‌.ಭೋಜೇಗೌಡ ನಿರ್ವಹಣೆ ಮಾಡಿರುವ ಕೆರೆ.   

ಕಳಸ: ಕಳೆದ ವರ್ಷದ ಮಳೆ ಕೊರತೆಯಿಂದ ಮಲೆನಾಡಿನಲ್ಲೂ ಈಗ ನೀರಿಗೆ ತತ್ವಾರ ಆಗಿದೆ. ಅಡಿಕೆ ಮತ್ತು ಕಾಫಿ ತೋಟಗಳಿಗೆ ಎತ್ತರದ ಗುಡ್ಡದಿಂದ ಗುರುತ್ವಾಕರ್ಷಣ ಬಲದಿಂದ ಬರುತ್ತಿದ್ದ ನೈಸರ್ಗಿಕ ನೀರೇ ಆಧಾರ. ಆದರೆ ಈ ಬಾರಿ ಈ ಬಗೆಯ ನೀರು ಬಹಳಷ್ಟು ಕಡೆ ಬತ್ತಿದೆ.

ತೋಟಗಳಿಗೆ ನೀರಿನ ಆಸರೆ ಇಲ್ಲವಾಗಿದೆ. ಆದರೆ ಈ ಕಠಿಣ ಸನ್ನಿವೇಶದಲ್ಲೂ ಅನೇಕ ತೋಟಗಳಿಗೆ ನೀರಿನ ಆಸರೆಯಾಗಿರುವುದು ಜಲ ಸಮೃದ್ಧಿಯ ಪಾಠ ಹೇಳುವ ಕೆರೆಗಳು.

ಮಲೆನಾಡಿನಲ್ಲಿ ಗುಡ್ಡಗಳ ತಪ್ಪಲಿನಲ್ಲಿ ಇರುವ ಜೌಗು ಪ್ರದೇಶದಲ್ಲಿ ಅಥವಾ ನೀರಿನ ಒರತೆ ಇರುವ ಭತ್ತದ ಗದ್ದೆಗಳಲ್ಲಿ ಕೆರೆಗಳನ್ನು ನಿರ್ಮಿಸುವುದು ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಆಚರ  ಣೆಯೇ ಆಗಿದೆ. ಪ್ರತಿ ವರ್ಷವೂ ಮಳೆ  ಗಾಲ ಕಳೆದ ಕೂಡಲೇ ಬಯಲು ಸೀಮೆ  ಯಿಂದ ಇಲ್ಲಿಗೆ ವಲಸೆ ಬರುವ ವಡ್ಡರ ಜನಾಂಗಕ್ಕೆ ‘ಕೆರೆ ಕೆಲಸ’ವೇ ಪ್ರಮುಖ ಜೀವನಾಧಾರ.

30 ರಿಂದ 60 ಅಡಿ ಉದ್ದ ಮತ್ತು 40 ಅಡಿಯಿಂದ 100 ಅಡಿ ಅಗಲದ ವರೆಗೆ ಮಣ್ಣನ್ನು 10 ಅಡಿ ಆಳಕ್ಕೆ ಬಗೆದು ಮಣ್ಣನ್ನು ಸುತ್ತಲೂ ಒಡ್ಡು ಹಾಕುವುದು, ಒಳಗಿನ ಒಸರನ್ನು ಸಂಗ್ರಹಿಸುವುದೇ ಈ ಕೆರೆಗಳ ರಚನೆಯ ಸರಳವಾದ ಬಗೆ. ಇಂತಹ ಕೆರೆಗಳಿಂದ ದಿನಕ್ಕೆ ಒಂದು ಎಕರೆಯಷ್ಟು ತೋಟಕ್ಕೆ ನೀರನ್ನು ತುಂತುರು ನೀರಾವರಿ ಮೂಲಕ ಹನಿಸು  ವುದು ಸಾಧ್ಯವಿದೆ.

ADVERTISEMENT

ವಿಶೇಷ ಎಂದರೆ ಈ ಕೆರೆಗಳು ಮಾರನೇ ದಿನವೇ ಮತ್ತೆ ತುಂಬಿರುತ್ತವೆ ಮತ್ತು ಸತತ ದಿನಗಳಲ್ಲಿ ತೋಟಕ್ಕೆ ನೀರು ಹಾಯಿಸಲು ಸಜ್ಜಾಗಿ ರುತ್ತವೆ. ಈಗೀಗ ಹಿಟಾಚಿ ಯಂತ್ರ ಬಳಸಿ ಬೃಹತ್‌ ಗಾತ್ರದ ಕೆರೆ ನಿರ್ಮಿಸುವ ಕೆಲ ಸವೂ ನಡೆಯುತ್ತಿದೆ. ಕೆಲವೆಡೆ 1–5 ಎಕರೆಯಷ್ಟು ಬೃಹತ್‌ ವಿಸ್ತಾರದ ಕೆರೆಗಳು ನೂರಾರು ಎಕರೆ ತೋಟಕ್ಕೆ ಜಲ ಮೂಲ ಆಗಿದೆ.

‘ನಮ್ಮ ಗೊರಸು ಗದ್ದೆಯಲ್ಲಿ 5 ವರ್ಷದ ಹಿಂದೆ 30 ಅಡಿ ಅಗಲ 100 ಅಡಿ ಉದ್ದದ ಕೆರೆ ತೆಗೆಸಿದೆವು. ಪಕ್ಕದ ಜಮೀನಿನಿಂದ ಹಾದು ಬರುವ ಒಸ ರನ್ನೂ ಇದೇ ಕೆರೆಗೆ ತಿರುಗಿಸಿದ್ದರಿಂದ ವರ್ಷವಿಡೀ ನೀರು ಕಡಿಮೆ ಆಗುವುದಿ ಲ್ಲ’ ಎಂದು ಎಡದಾಳಿನ ಕೃಷಿಕ ಕೆ. ಎನ್‌.  ಭೋಜೇಗೌಡ ಬಿರು ಬೇಸಿಗೆಯ ಲ್ಲೂ ತುಂಬಿರುವ ಕೆರೆ ತೋರಿಸಿ ಹೇಳುತ್ತಾರೆ.

ಎರಡು ಕೆರೆ ಬಳಸಿ 10 ಎಕರೆ ಕಾಫಿ ತೋಟಕ್ಕೆ ನೀರು ಹಾಯಿಸುವ ಬಿಳಲ್‌ ಗೋಡಿನ ಶ್ರೀಪಾಲಯ್ಯ ಅವರ ಯಶಸ್ಸಿನ ಕಥೆಯೂ ಕುತೂಹಲಕರವಾಗಿದೆ. ‘ಮಳೆ ನೀರನ್ನೇ ನಂಬಿ ಕಾಫಿ ಕೃಷಿ ಮಾಡುತ್ತಿ ದ್ದಾಗ ಅಲ್ಪಸ್ವಲ್ಪ ಬೆಳೆ ಬರುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ತೋಟದಲ್ಲಿ ಇದ್ದ ಎರಡು ಕೆರೆಗಳನ್ನು ಶುಚಿ ಮಾಡಿ ಈಗ ಸಕಾಲಕ್ಕೆ ತೋಟಕ್ಕೆ ನೀರು ಹೊಡೆಯುತ್ತಿದ್ದೇನೆ. ಈಗ ಹಿಂದಿಗಿಂತ ಎರಡು ಪಟ್ಟು ಇಳುವರಿ ಬರುತ್ತಿದೆ’ ಎಂದು ಅವರು ಕೆರೆಗಳ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಾರೆ.

ಹಳ್ಳ ಮತ್ತು ನದಿಯಿಂದ ನೀರು ಎತ್ತುವುದು ಕಾನೂನು ಬಾಹಿರ ಎಂಬ ಅಂಶದ ಹಿನ್ನೆಲೆಯಲ್ಲಿ ಕೆರೆಗಳನ್ನು ಕೃಷಿಗಾಗಿ ಬಳುಸುವುದು ನ್ಯಾಯಸಮ್ಮತ ನಿರ್ಧಾರ. ಅನೇಕ ಕೃಷಿಕರು ತಮ್ಮ ಜಮೀನಿನಲ್ಲಿ ಹಿಂದಿನಿಂದಲೂ ಇದ್ದ ಕೆರೆ ಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಪರಿಣಾ ಮವಾಗಿ ಈಗ ನೀರಿನ ಕೊರತೆಯಿಂದ ತೋಟದ ಇಳುವರಿ ಕಡಿತಗೊಂಡಿರುವ ಬಗ್ಗೆ ಅವರು ಆತಂಕ ಮತ್ತು ನಿರಾಶೆ ಹೊಂದಿದ್ದಾರೆ. ಆದರೆ ಸಾಂಪ್ರದಾಯಿಕ ಕೆರೆಗಳ ಪುನಶ್ಚೇತನಕ್ಕೆ ಮಲೆನಾಡಿನಲ್ಲಿ ಆಸಕ್ತಿಯೇ ಕಡಿಮೆ ಆಗಿದೆ.

ಜಲಾನಯನ ಇಲಾಖೆಯು ಅನೇಕ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅನು ದಾನ ನೀಡಿದೆ. ಆದರೆ ಕೃಷಿಕರಲ್ಲಿ ಆಸ ಕ್ತಿಯ ಕೊರತೆ ಮತ್ತು ಕೃಷಿ ಹೊಂಡಗಳ ಅಸಮರ್ಪಕ ಅನುಷ್ಠಾನ ದಿಂದಾಗಿ ಅವು ಗಳು ವಿಫಲವಾಗುತ್ತಿವೆ ಎಂದು ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯುವ ಮಲೆನಾಡಿನಲ್ಲಿ ಬೇಸಿಗೆ ಯಲ್ಲಿ ನೀರಿನ ಕೊರತೆ ನಿಜಕ್ಕೂ ವಿಪ ರ್ಯಾಸ. ಇಂತಹ ಸನ್ನಿವೇಶದಿಂದ ಪಾರಾಗಲು ಎಲ್ಲ ಜಮೀನಿನಲ್ಲೂ ಇರುವ ಜೌಗು ಪ್ರದೇಶದಲ್ಲಿ ಆಯಾ ಜಮೀನಿಗೆ ಒಗ್ಗುವ ಗಾತ್ರದ ಕೆರೆ ನಿರ್ಮಿಸಿ ಕೊಳ್ಳು ವುದು ಲಾಭದಾಯಕ ಉಪಾಯ. ಈ ಕೆರೆಗಳಲ್ಲಿ ಮೀನು ಸಾಕಾಣಿಕೆಯ ಲಾಭವೂ ಇದೆ. ಕೃಷಿಕರು ಆಸಕ್ತಿ ತೋರಿದರೆ  ಅನುಕೂಲ ಇದ್ದೇ ಇದೆ. 
-ರವಿ ಕೆಳಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.