ಚಿಕ್ಕಮಗಳೂರು: ಮಹಿಳೆಯರ ಏಳಿಗೆ ನಿಟ್ಟಿನಲ್ಲಿ ಕುಟುಂಬದವರ ಸಹಕಾರ ಅಗತ್ಯ, ಮಹಿಳೆಯರಿಗೆ ಎಲ್ಲವನ್ನೂ ಸಂಭಾಳಿಸುವ ಶಕ್ತಿ ಇದೆ ಎಂದು ಬಿಬಿಎಂಪಿ ಸದಸ್ಯೆ ರೂಪಾಲಿಂಗರಾಜು ಹೇಳಿದರು.
ನಗರದ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕುರುಹಿನಶೆಟ್ಟಿ (ನೇಕಾರ) ಮಹಿಳಾ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಗುಲಾಮರಲ್ಲ, ಅವರು ಸಂಸಾರಕ್ಕೆ ಮಾತ್ರ ಸೀಮಿತರಲ್ಲ. ಮಹಿಳೆಯರನ್ನು ಬೆಂಬಲಿಸುವವರು ಕಡಿಮೆ. ಹೀಗಾಗಿ ಪ್ರತಿಭೆ ಇದ್ದರೂ ಕುಟುಂಬದವರ ಪ್ರೋತ್ಸಾಹ ಸಿಗದೆ ಮಹಿಳೆಯರು ಹಿಂದೆಬೀಳುತ್ತಾರೆ ಎಂದು ಹೇಳಿದರು.
ಮಹಿಳೆಯರು ಅಡಿಗೆ ಮನೆಗೆ ಸೀಮಿತವಾಗಬಾರದು. ಸಾಧನೆ ಮೆರೆಯಲು ಎಲ್ಲ ಕ್ಷೇತ್ರಗಳಲ್ಲೂ ಅವಕಾಶಗಳು ಇವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಮೀಸಲಾತಿಯಿಂದ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಲಭಿಸುತ್ತಿದೆ. ಸವಾಲುಗಳನ್ನು ಎದುರಿಸುವ ಚಾಕಚಾಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು. ಧೈರ್ಯದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುರುಹಿನಶೆಟ್ಟಿ (ನೇಕಾರ) ಮಹಿಳಾ ಸಂಘದವರು ಸಂಘಕ್ಕೆ ಒಂದು ನಿವೇಶನ ಒದಗಿಸುವಂತೆ ಮನವಿ ಮಾಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.
ಹೊಸಹೊಳಲಿನ ಕೆಕೆಜಿ ಸಂಧ್ಯಾ ಜಿ.ಸೋಮಶೇಖರ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಖಿಲ ಭಾರತ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ದೇವಿಕಾ ಭಾನು, ಗೌರವ ಅಧ್ಯಕ್ಷೆ ಚಂದ್ರಮ್ಮ, ಜಿಲ್ಲಾಧ್ಯಕ್ಷೆ ಚಂದ್ರಾವತಿ ಶಂಕರ್, ಪ್ರಧಾನ ಕಾರ್ಯದರ್ಶಿ ಪುಷ್ಪಾ ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು, ಕೆಕೆಜಿ ಸಂಧ್ಯಾ ಜಿ.ಸೋಮಶೇಖರ್ ಸೇವಾ ಟ್ರಸ್ಟ್ ಅಧ್ಯಕ್ಷೆ ಸಂಧ್ಯಾ ಜಿ.ಸೋಮಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.