ADVERTISEMENT

ಮಾನವೀಯತೆಯಿಂದ ವ್ಯಕ್ತಿತ್ವ ವಿಕಸನ

ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 8:31 IST
Last Updated 16 ಫೆಬ್ರುವರಿ 2017, 8:31 IST
ಶೃಂಗೇರಿ: ಶಿಕ್ಷಣ ಪಡೆದವರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದ್ದು, ಶಿಕ್ಷಿತರಾದವರಲ್ಲಿ ಪ್ರೀತಿ, ವಾತ್ಸಲ್ಯ, ಮಾನವೀಯತೆ ಇದ್ದರೆ ಮಾತ್ರ ಆತನ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾನವನು ತನ್ನ ಮೇಲೆ ನಂಬಿಕೆ ಇರಿಸಿದವರ ಮನಸ್ಸನ್ನ ನೋಯಿಸಬಾರದು ಎಂದು ಶಾರದ ಪೀಠದ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.
 
ಜೆಸಿಬಿಎಂ ಕಾಲೇಜಿನ ಆವರಣದಲ್ಲಿ ಶಾರದಾ ಪೀಠದ ಚಂದ್ರಶೇಖರಭಾರತೀ ಸ್ವಾಮೀಜಿ ಅವರ ಪ್ರತಿಮೆಯನ್ನು ಅವರು ಬುಧವಾರ ಅನಾವರಣಗೊಳಿಸಿ ಅವರು  ಮಾತನಾಡಿದರು.
 
ಸಜ್ಜನರು ಸಮಾಜದ ಏಳಿಗೆಗಾಗಿ ಸಹೃದಯತೆಯಿಂದ ದುಡಿಯುತ್ತಾರೆ. ಅವರ ಏಳಿಗೆ ಕಂಡು ನಾವು ಸಂತೋಷ ಪಡಬೇಕು. ಸಾಮ, ದಾನ, ಬೇಧ, ದಂಡದ ಮೂಲಕ ನಾವು ಮಾನವ ನನ್ನು ತಿದ್ದಬೇಕು. ಸಂಸ್ಥೆಯ ಘನತೆಗೆ ಕುಂದುಬಾರದಂತೆ ಸರ್ವರೂ ಅದರ ಏಳಿಗೆಗಾಗಿ ಶ್ರಮಿಸಬೇಕು. ಗುರುವಿನ ಬಗ್ಗೆ ವಿನಯದಿಂದ ಎಲ್ಲರೂ  ಭಕ್ತಿ ಯನ್ನು ತೋರಿಸಬೇಕು. ನಮ್ಮ ಪೀಠದ ಗುರುಗಳಾಗಿದ್ದ ಚಂದ್ರಶೇಖರ ಭಾರತೀ ಅವರ ಆಶಯದಂತೆ ಕಾಲೇಜು 1963 ರಲ್ಲಿ ಪ್ರಾರಂಭಗೊಂಡಿದ್ದು ಇಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಿಂತನೆಗಳನ್ನು ಬೆಳೆಸಿ ಕೊಳ್ಳಬೇಕು ಎಂದರು.
 
ಕ್ಷೇತ್ರದ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಅಂದಿನ ಯತಿಗಳ ಆಶಯ ದಂತೆ ಕಾಲೇಜು ಸ್ಥಾಪನೆ ಗೊಂಡಿದ್ದು ಸಾವಿರಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದಾರೆ. ಕಾಲೇಜಿನಲ್ಲಿ ಅಂದು ವಿದೇಶದಿಂದ ಬಂದಂತಹ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಮಠವು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಕ್ಷೇತ್ರದ  ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಅನ್ನದಾಸೋಹವನ್ನು ನೀಡುತ್ತಿರುವ ಮಠದ ಸಾಮಾಜಿಕ ಕಳಕಳಿ ಮಾದರಿ. ನಾವು ಗುರಿ ತಲುಪಬೇಕಾದರೆ ಮುಂದೆ ಗುರು ಇರಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
 
ಮಣಿಪಾಲ ಎ.ಜಿ.ಇಯ ಆಡಳಿತಾಧಿ ಕಾರಿ ಡಾ.ಎಚ್. ಶಾಂತಾರಾಮ್ ಮಾತ ನಾಡಿ, ಮಣಿಪಾಲದ ಆಕಾಡೆಮಿಯ ಸಂಸ್ಥೆಗಳು ಯತಿಗಳ ಆರ್ಶೀವಾದದಿಂದ ಅಭಿವೃದ್ಧಿ ಹೋದುತ್ತಾ ಸಾಗುತ್ತಿದ್ದು, ಕಾಲೇಜಿನಲ್ಲಿ ಗುರುಗಳಾದ ಚಂದ್ರ ಶೇಖರಭಾರತೀ ಸ್ವಾಮೀಜಿ ಅವರ ಪ್ರತಿಮೆ ಆನಾವರಣಗೊಂಡಿದ್ದು ಅವರ ವ್ಯಕ್ತಿತ್ವದ ಛಾಪು ವಿದ್ಯಾರ್ಥಿಗಳ ಮನ ಸ್ಸನ್ನು ಆವರಿಸಬೇಕಾಗಿದೆ. ಶೃಂಗೇರಿ ಪುಣ್ಯಕ್ಷೇತ್ರ. ಇಲ್ಲಿನ ಗುರುಪರಂಪರೆ ಆಧ್ಯಾತ್ಮಿಕ, ಶ್ಯೆಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
 
ಭಾರತೀ ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳಾದ ಆನಂತಪದ್ಮನಾಭ ಭಟ್, ಕಚ್ಚೋಡಿ ಶ್ರೀನಿವಾಸ್, ಸುಂಕುರ್ಡಿ ನಾಗೇಶ್, ಟಿ.ಕೆ.ಪರಾಶರ, ಗೋಪಾಲ್ ಹೆಗ್ಗಡೆ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಟಿ.ಟಿ, ಕಳಸಪ್ಪ, ಮಠದ ಆಡಳಿತಾಧಿಕಾರಿ ಡಾ.ವಿ. ಆರ್. ಗೌರೀ ಶಂಕರ್, ಕಾಲೇಜಿನ ನಿವೃತ್ತ ಪ್ರಚಾರ್ಯ ಡಾ.ವೀರಪ್ಪಗೌಡ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವ್ಯೆಭವ ಹಾಗೂ "ಮಹಿಷ ಮರ್ಧಿನಿ" ಯಕ್ಷಗಾನ ಕಾರ್ಯಕ್ರಮ ನೆರವೇರಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.