ಚಿಕ್ಕಮಗಳೂರು: ‘ಸಂವಿಧಾನ ಬದಲಾವಣೆ ಮಾಡುವ ಚರ್ಚೆ ಬಿಜೆಪಿಯಲ್ಲಾಗಲಿ, ಕೇಂದ್ರ ಸರ್ಕಾರದ ಮುಂದಾಗಲಿ ಇಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಹೇಳಿಕೆಗಳನ್ನು ಕೇಂದ್ರ ನಾಯಕರು ಗಮನಿಸುತ್ತಿದ್ದಾರೆ. ಸಂವಿಧಾನವು ಅಂಬೇಡ್ಕರ್ ಅವರ ಕೊಡುಗೆ. ಅವರು ನೀಡಿದ ಸಂವಿಧಾನದಿಂದಾಗಿ ನಮಗೆಲ್ಲ ಧ್ವನಿ ಬಂದಿದೆ’ ಎಂದು ಉತ್ತರಿಸಿದರು.
‘ಮಹದಾಯಿ ವಿವಾದವನ್ನು ನ್ಯಾಯಮಂಡಳಿಯಾಚೆಗೆ ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಯತ್ನ ಶುರು ಮಾಡಿದ್ದಾರೆ. ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳ ಮನ ವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರತಿಭಟನಾಕಾರರು ಧರಣಿ ಕೈಬಿಡ ಬೇಕು’ ಎಂದು ಮನವಿ ಮಾಡಿದರು.
‘ಗೋವಾದ ಕಾಂಗ್ರೆಸ್ ಮುಖಂಡರನ್ನು ಕಾಂಗ್ರೆಸ್ನವರು, ಬಿಜೆಪಿ ಮುಖಂಡರನ್ನು ಬಿಜೆಪಿಯವರು ಮನವೊಲಿಸುವ ಕೆಲಸ ಮಾಡಬೇಕು ಎಂದು ನಿರ್ಧಾರವಾಗಿತ್ತು. ಇದಕ್ಕೆ ಕಾಂಗ್ರೆಸ್ ಸ್ಪಂದಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.