ADVERTISEMENT

ಬೀದಿಗೆ ಬಂತು ಟಿಕೆಟ್ ಆಕಾಂಕ್ಷಿಗಳ ಒಳಜಗಳ!

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 8:45 IST
Last Updated 2 ಜನವರಿ 2018, 8:45 IST

ತರೀಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ನಡೆಯುವ ಬಿಜೆಪಿ ಪರಿವರ್ತನಾ ಯಾತ್ರೆಗೆ ವೇದಿಕೆ ಬಳಿ ಹಾಕಿದ್ದ ಫ್ಲೆಕ್ಸ್‌ ಹರಿದಿರುವ ವಿಚಾರಕ್ಕೆ ಸಂಬಂಧ ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

ಟಿಕೆಟ್‌ ಆಕಾಂಕ್ಷಿಯಾಗಿರುವ ಎಚ್‌.ಎಂ.ಗೋಪಿಕೃಷ್ಣ ಅವರು ಶುಭಾಶಯ ಕೋರಿ ಹಾಕಿದ್ದ ಫ್ಲೆಕ್ಸನ್ನು ಒಂದು ಗುಂಪಿನವರು ಹರಿದು ಹಾಕಿದ್ದಾರೆ ಎಂಬ ವಿಷಯದಲ್ಲಿ ಎರಡು ಗುಂಪುಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಸೋಮವಾರ ಮಧ್ಯಾಹ್ನ ವೇದಿಕೆ ಬಳಿ ಕಾರ್ಯಕ್ರಮಕ್ಕೆ ಹಾಕಿದ್ದ ಕುರ್ಚಿಗಳನ್ನು ಇನ್ನೊಂದು ಗುಂಪು ಮುರಿದು ಹಾಕಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

ಎಚ್.ಎಂ. ಗೋಪಿಕೃಷ್ಣ ಮಾತನಾಡಿ ‘ಯಾರೋ ಕಿಡಿಗೇಡಿಗಳು ನನ್ನ ಭಾವಚಿತ್ರ ಇರುವ ಫ್ಲೆಕ್ಸ್‌ ಅನ್ನು ಹರಿದು ಹಾಕಿದ್ದು, ಇದರಿಂದ ತಮ್ಮ ಕಾರ್ಯಕರ್ತರಿಗೆ ಗೊಂದಲವಾಗಿದೆ. ಕಾರ್ಯಕರ್ತರನ್ನು ಸಮಧಾನಪಡಿಸಿದ್ದೇನೆ. ವರಿಷ್ಠರ ಸಲಹೆಯಂತೆ ಕಾರ್ಯಕ್ರಮದ ಯಶಸ್ಸಿಗೆ ನಾನು ದುಡಿಯುತ್ತಿದ್ದು, ಈಗ ಗೊಂದಲ ಬಗೆಹರಿದಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಡಿ.ಎಸ್.ಸುರೇಶ್ ‘ಫ್ಲೆಕ್ಸ್ ಹರಿಯುವ ಕೀಳು ಮಟ್ಟದ ರಾಜಕಾರಣ ನಮ್ಮ ಕಾರ್ಯಕರ್ತರು ಮಾಡಿಲ್ಲ. ಆದರೆ ವೇದಿಕೆಗೆ ಬಂದು ಕುರ್ಚಿಗಳನ್ನು ಮುರಿದು ಹಾಕಿದ್ದು ಖಂಡನೀಯ. ಕಾರ್ಯಕ್ರಮವು ಯಾವುದೇ ಅಡೆ ತಡೆಯಿಲ್ಲದೆ ಯಶಸ್ವಿಯಾಗಿ ನಡೆಯಲಿದೆ’ ಎಂದರು.

ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿರುವ ಇಬ್ಬರು ನಾಯಕರ ವೈಮನಸ್ಸು ಈಗ ಬಹಿರಂಗಗೊಂಡಿದ್ದು, ಮಂಗಳವಾರ ನಡೆಯುವ ಪರಿವರ್ತನಾ ಯಾತ್ರೆಯು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.