ADVERTISEMENT

6 ಮಂದಿಯಿಂದ 11 ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆಗೆ ಇಂದು ಕೊನೆದಿನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:15 IST
Last Updated 24 ಏಪ್ರಿಲ್ 2018, 9:15 IST

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮ‌ವಾರ ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರು ನಾಲ್ಕು, ಜೆಡಿಎಸ್‌ನ ಬಿ.ಎಚ್‌.ಹರೀಶ್‌ ಅವರು ಮೂರು, ಪಕ್ಷೇತರ ಎರಡು, ಶಿವಸೇನೆಯ ಬಿ.ವಿ.ರಂಜಿತ್‌, ಎಂಇಪಿಯ ನೂರುಲ್ಲಾಖಾನ್‌ ತಲಾ ಒಂದು ನಾಮಪತ್ರ ಸಲ್ಲಿಸಿದ್ದು, ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರು ಬೆಂಬಲಿಗರು, ಮುಖಂಡರು, ಕಾರ್ಯಕರ್ತರೊಂದಿಗೆ ಬೆಳಿಗ್ಗೆ 11.30ರ ಹೊತ್ತಿಗೆ ತಾಲ್ಲೂಕು ಕಚೇರಿ ಬಳಿಗೆ ಬಂದರು. ಮುಖಂಡರಾದ ಗಾಯತ್ರಿ ಶಾಂತೇಗೌಡ, ಎಂ.ಎಲ್‌.ಮೂರ್ತಿ, ಡಾ.ಡಿ.ಎಲ್‌.ವಿಜಯಕುಮಾರ್‌, ಸಿ.ಆರ್‌.ಸಗೀರ್‌ ಅಹಮದ್‌ ಅವರೊಂ ದಿಗೆ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ತಾಲ್ಲೂಕು ಕಚೇರಿ ಮುಂದಿನ ರಸ್ತೆಯಲ್ಲಿ ಬೆಂಬಲಿಗರು, ಕಾರ್ಯ ಕರ್ತರು ಜಮಾಯಿಸಿದ್ದರು. ಕಾಂಗ್ರೆಸ್‌ ಮುಖಂಡರೂ ಆಗಿರುವ ನಟಿ ಭಾವನಾ ಕೈಕುಲುಕಲು ಅಲ್ಲಿದ್ದವರು ಮುಗಿಬಿದ್ದರು. ಕೆಲವರು ಭಾವನಾ ಅವರೊಂದಿಗೆ ಸ್ವಂತೀ (ಸೆಲ್ಫಿ) ತೆಗೆದು ಕೊಂಡರು. ನಾಮಪತ್ರ ಸಲ್ಲಿಕೆ ನಂತರ ಬಿ.ಎಲ್‌.ಶಂಕರ್, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಮೆರವಣಿಗೆಯಲ್ಲಿ ತೆರಳಿದರು.

ADVERTISEMENT

ಬೋಳರಾಮೇಶ್ವರ ದೇಗುಲದಿಂದ ಹೊರಟಿದ್ದ ಜೆಡಿಎಸ್‌ ಮೆರವಣಿಗೆಯು ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್‌ ಮೆರವಣಿಗೆಗೆ ಮುಖಾಮುಖಿಯಾಯಿತು. ಈ ಸಂದರ್ಭದಲ್ಲಿ ಹರ್ಷೋದ್ಘಾರ, ಸಂಭ್ರಮ, ಕೇಕೆ, ಶಿಳ್ಳೆ ಮುಗಿಲುಮುಟ್ಟಿದ್ದವು. ಟ್ರಾಫಿಕ್‌ ಜಾಮ್‌ ಆಗಿ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರು ಹರಸಾಹಸಪಟ್ಟು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಾಂಗ್ರೆಸ್‌ ಮೆರವಣಿಗೆಯು ಎಂ.ಜಿ.ರಸ್ತೆ ಮೂಲಕ ಆಜಾದ್‌ ಪಾರ್ಕ್‌ ತಲುಪಿತು. ಜೆಡಿಎಸ್‌ ಮೆರವಣಿಗೆಯ ತಾಲ್ಲೂಕು ಕಚೇರಿಗೆ ತಲುಪಿತು.

ಜೆಡಿಎಸ್‌ನ ಬಿ.ಎಚ್‌.ಹರೀಶ್‌ ಅವರು ಜೆಡಿಎಸ್‌ ಮುಖಂಡರಾದ ಎಸ್‌.ಎಲ್‌.ಧರ್ಮೇಗೌಡ, ಎಸ್‌.ಎಲ್‌.ಭೋಜೇಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅವರು ಮೂರು ನಾಮಪತ್ರ ಸಲ್ಲಿಸಿದ್ದಾರೆ.

ಶಿವಸೇನೆಯಿಂದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಬಿ.ವಿ.ರಂಜಿತ್‌ (ರಂಜಿತ್‌ ಶೆಟ್ಟಿ), ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿಯಿಂದ ನೂರುಲ್ಲಾ ಖಾನ್‌, ಪಕ್ಷೇತರವಾಗಿ ಕೆ.ಎ.ಗೋಪಾಲಕೃಷ್ಣ ಮತ್ತು ಬಿ.ಎ.ತಿಮ್ಮಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕು ಕಚೇರಿ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿತ್ತು.

ಜಿಲ್ಲೆಯಲ್ಲಿ 24 ಮಂದಿ ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು:  ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗಳಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರ ಪಟ್ಟಿ ಇಂತಿದೆ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿ.ಎಲ್.ಶಂಕರ್, ಜೆಡಿಎಸ್‌ನಿಂದ ಬಿ.ಎಚ್.ಹರೀಶ್, ಆಲ್ ಇಂಡಿಯಾ ಮಹಿಳಾ ಎಂಪಾವರ್‌ಮೆಂಟ್ ಪಾರ್ಟಿಯಿಂದ ನೂರುಲ್ಲಾಖಾನ್, ಶಿವಸೇನೆಯಿಂದ ಬಿ.ವಿ.ರಂಜಿತ್, ಪಕ್ಷೇತರವಾಗಿ ಕೆ.ಎ.ಗೋಪಾಲಕೃಷ್ಣ , ಬಿ.ಎಂ.ತಿಮ್ಮಶೆಟ್ಟಿ, ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಸ್‌.ಎಂ.ನಾಗರಾಜ್‌, ಬಿಜೆಪಿಯಿಂದ ಡಿ.ಎಸ್.ಸುರೇಶ್,ರಿಪಬ್ಲಿಕನ್‌ ಸೇನೆಯಿಂದ ಕಲೀಲ್, ಪಕ್ಷೇತರವಾಗಿ ಜಿ.ಎಚ್.ಶ್ರೀನಿವಾಸ್, ಡಿ.ಸಿ.ಸುರೇಶ್, ಎಸ್.ಜಿ.ವಾಣಿ, ಎ.ಬಿ.ರಾಜಕುಮಾರ, ಸಾದಿಕ್ ಪಾಷಾ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆ.ಎಸ್.ಆನಂದಪ್ಪ, ಪಕ್ಷೇತರವಾಗಿ ಸಿ.ಎಂ.ಧನಂಜಯ, ಎಚ್.ಪ್ರದೀಪ್, ಸಿ.ನಂಜಪ್ಪ- ಐಎನ್‌ಸಿ ಮತ್ತು ಪಕ್ಷೇತರ, ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿ.ಡಿ.ರಾಜೇಗೌಡ, ಪಕ್ಷೇತರವಾಗಿ ಎಂ.ಕೆ.ದಯಾನಂದ್, ಕಟ್ಟಿನಮನೆ ಕೆ.ವಿ.ಮಹೇಶ್, ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್‌ನ ಬಿ.ಬಿ.ನಿಂಗಯ್ಯ, ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಪಕ್ಷೇತರವಾಗಿ ಎಸ್.ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.