ADVERTISEMENT

ಸಮಗ್ರತೆ ಮರೆತ ಬಹುಮತದ ಮುಖ್ಯಮಂತ್ರಿ: ಸಿ.ಟಿ.ರವಿ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 11:38 IST
Last Updated 7 ಜುಲೈ 2018, 11:38 IST
   

ಕಡೂರು: ‘ಮುಖ್ಯಮಂತ್ರಿಗಳು ಜನಮತದ ಮುಖ್ಯಮಂತ್ರಿಯಾಗದಿದ್ದರೂ ಬಹುಮತದ ಮುಖ್ಯಮಂತ್ರಿಯಾಗಿದ್ದಾರೆ. ಬಜೆಟ್ ಮಂಡನೆಯಲ್ಲಿ ಮಾತ್ರ ಸಮಗ್ರತೆಯನ್ನು ಮರೆತಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಕಡೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿಕ್ಕಮಗಳೂರು ಜಿಲ್ಲೆಗೆ ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ. ಜಿಲ್ಲೆಯ ಶಾಸಕರು 8 ಬೇಡಿಕೆಗಳನ್ನಿಟ್ಟಿದ್ದೆವು. ಕನಿಷ್ಠ 3 ಬೇಡಿಕೆಗಳನ್ನಾದರೂ ಈಡೇರಿಸುವ ಭರವಸೆಯಿತ್ತು. ಆದರೆ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಮರೆತೇ ಬಿಟ್ಟಿರುವುದು ವಿಪರ್ಯಾಸ’ ಎಂದರು.

‘ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ತೆರಿಗೆಯನ್ನು ಆರೂವರೆ ಕೋಟಿ ಜನಕ್ಕೂ ಹಾಕಿದವರು ಸುಸ್ತಿಸಾಲ ಮಾತ್ರ ಮನ್ನಾ ಮಾಡಿದ್ದಾರೆ. ಕೃಷಿ ಸಾಲ ಮನ್ನಾ ಮಾಡಿದ್ದರೂ ಕೃಷಿ ಅಭಿವೃದ್ಧಿ ಸಾಲದ ಬಗ್ಗೆ ಚಕಾರವಿಲ್ಲ. ಒಟ್ಟಾರೆ ಸಾಲ ಮನ್ನಾ ವಿಚಾರ ಕಟ್ಟಿದವನು ಕೋಡಂಗಿ, ಕಟ್ಟದವನು ಈರಭಧ್ರ ಎಂಬಂತಾಗಿದೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಕೆಲವೇ ಜಿಲ್ಲೆಗೆ ಸೀಮಿತವಾಗಿರುವ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ನಾವು ಇದರ ವಿರುದ್ಧ ಹೋರಾಟ ಮಾಡಬೇಕಿದ್ದು ಸಂಘ ಸಂಸ್ಥೆಗಳು ನಮ್ಮನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಸ್.ಕೆ.ಕಲ್ಮರುಡಪ್ಪ, ಚಿಕ್ಕದೇವನೂರು ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.