ADVERTISEMENT

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

‘ಸಂವಾದ ಕಾರ್ಯಕ್ರಮ’ ದಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಯಾಧೀಶ ವಸ್ತ್ರಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:33 IST
Last Updated 18 ಜನವರಿ 2017, 5:33 IST
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ   

ಚಿತ್ರದುರ್ಗ: ‘ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಸಲಹೆ ನೀಡಿದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿ ಕೆಲವರು ಪರೀಕ್ಷೆ ಎಂದೊಡನೆ ಆತಂಕಕ್ಕೆ ಒಳಗಾಗುತ್ತಾರೆ. ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಬೇಕು. ಅನುತ್ತೀರ್ಣರಾದರೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಆತ್ಮವಿಶ್ವಾಸದಿಂದ ಮತ್ತೊಮ್ಮೆ ಪರೀಕ್ಷೆ ಬರೆಯಬೇಕು. ಸತತ ಪ್ರಯತ್ನವಿದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ’ ಎಂದು ತಿಳಿ ಹೇಳಿದರು.

‘ವಿದ್ಯಾರ್ಥಿ ಸಮೂಹ  ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವಿನ ಗುರುಶಿಷ್ಯರ ಸಂಬಂಧ ಉತ್ತಮ ವಾಗಿರಬೇಕು. ಇದು ಕಲಿಕೆಗೂ ಪೂರಕ ವಾದ ವಾತಾವರಣ ನಿರ್ಮಿಸುತ್ತದೆ’ ಎಂದು ಸಲಹೆ ನೀಡಿದರು.

‘ಪ್ರತಿ ಪ್ರಜೆಗೂ ಕಾನೂನಿನ ಅರಿವು ಅಗತ್ಯ. ಅದಕ್ಕಾಗಿ ಆಗಿದಾಂಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಮಾಡಲಾಗುತ್ತಿದೆ’ ಎಂದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸಂವಹನ ಮುಖ್ಯ.  ಆತಂಕದಿಂದ ಪರೀಕ್ಷೆಗೆ ಸಿದ್ಧರಾಗ ಬಾರದು. ಸೋಲು ಮತ್ತು ಗೆಲುವು ಜೀವನದ ಒಂದು ಭಾಗ. ಗೆದ್ದರೆ ಖುಷಿ ಪಡದೆ, ಸೋತರೆ ಎದೆಗುಂದದೇ  ಪರೀಕ್ಷೆ ಎದುರಿಸಬೇಕು’ ಎಂದು ಹೇಳಿದರು.

‘ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಉಪನ್ಯಾಸಕರು ಇದ್ದಾರೆ. ಆದರೆ, ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅವಿರತ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್ ಮಾತನಾಡಿ, ‘ಪೋಷಕರು ಮಕ್ಕಳಿಗೆ ಹೆಚ್ಚಿನ ಅಂಕ ಪಡೆಯಬೇಕು ಎಂದು ಒತ್ತಡ ಹೇರಬಾರದು. ಅಂಕಗಳೊಂದಿಗೆ ಜ್ಞಾನದ ಗುಣಮಟ್ಟವನ್ನು ಅಳೆಯಬಾರದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾತನಾಡಿ, ‘ಪೊಲೀಸ್‌ ಇಲಾಖೆಯಲ್ಲಿ  ಮಹಿಳೆಯರು ಉನ್ನತ ಸ್ಥಾನದಲ್ಲಿದ್ದಾರೆ. ವಿದ್ಯಾರ್ಥಿನಿಯರು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ, ಈ ಇಲಾಖೆಯಲ್ಲೂ ಮುಂದೆ ಪರೀಕ್ಷೆ ಎದುರಿಸಿ ಉತ್ತಮ ಅಧಿಕಾರಿಯಾಗಿ ಆಯ್ಕೆಯಾಗಬಹುದು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಎಚ್‌.ನಾಗರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು.  ಉಪನ್ಯಾಸಕಿ ಸಿ.ಬಿ.ಶೈಲಾ ನಿರೂಪಿಸಿದರು. ಉಪನ್ಯಾಸಕ ಬಿ.ಹನುಮಂತರಾಯ ವಂದಿಸಿದರು.

*
ಇತಿಹಾಸ ಓದುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತ ಆಗಬಾರದು. ಇತಿಹಾಸ ನಿರ್ಮಿಸುವ ಮೂಲಕ ಮಾದರಿಯಾಗಬೇಕು.
–ಎಸ್‌.ಬಿ.ವಸ್ತ್ರಮಠ, ನ್ಯಾಯಾಧೀಶರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT