ADVERTISEMENT

‘ಇಂದಿರಾ ಗಾಂಧಿ ಜನ ಮೆಚ್ಚಿದ ನಾಯಕಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 7:27 IST
Last Updated 20 ನವೆಂಬರ್ 2017, 7:27 IST

ಚಿತ್ರದುರ್ಗ: ‘ಮಾಜಿ ಪ್ರಧಾನಿ ಇಂದಿರಾಗಾಂಧಿ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನ ಮೆಚ್ಚಿದ ನಾಯಕಿಯಾಗಿದ್ದರು’ ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಾಹಿದಾ ಇಸ್ಮಾಯಿಲ್ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಭಾನುವಾರ ಇಂದಿರಾ ಗಾಂಧಿ ಅವರ ಸ್ಮರಣಾರ್ಥ ಹಮ್ಮಿ ಕೊಂಡಿದ್ದ ಜನ್ಮದಿನಾಚರಣೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

‘ಬ್ಯಾಂಕ್‌ಗಳ ರಾಷ್ಟ್ರೀಕರಣ, ಉಳುವವನೇ ಭೂಮಿಯ ಒಡೆಯ ಹೀಗೆ ಅನೇಕ ಯೋಜನೆ ಜಾರಿಗೊಳಿಸಿದರು. ಉಕ್ಕಿನ ಮಹಿಳೆ ಎಂಬುದಾಗಿ ಖ್ಯಾತಿ ಗಳಿಸಿದ್ದ ಅವರು ತುರ್ತು ಪರಿಸ್ಥಿತಿ ಹೇರಿ, ಅದನ್ನು ಕೂಡ ಸರಿಯಾದ ರೀತಿಯಲ್ಲಿ ನಿಭಾಯಿಸಿದರು’ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ, ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮಗಳನ್ನು ದೇಶದಲ್ಲಿ ಜಾರಿಗೆ ತರುವ ಮೂಲಕ ಅಭಿವೃದ್ಧಿ ಪರ ನಿಲುವು ತೋರಿದ್ದರು ಎಂದು ಸ್ಮರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಜಿ.ಶ್ರೀನಿವಾಸ್, ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್, ಮುಖಂಡರಾದ ಮಹಮದ್ ಅಹಮ್ಮದ್ ಪಾಷಾ, ಪೈಲ್ವಾನ್ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಯೋಗೇಶ್ ಬಾಬು, ಬಿ.ಟಿ.ಜಗದೀಶ್, ಟಿ.ಎಂ.ಕೆ.ತಾಜ್‌ಪೀರ್ ಇದ್ದರು.

ಮೊಳಕಾಲ್ಮುರು
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಅಂಗವಾಗಿ ಬ್ಲಾಕ್ ಕಾಂಗ್ರೆಸ್‌ನಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು, ಬ್ರೆಡ್‌ ವಿತರಣೆ ಮಾಡಲಾಯಿತು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಪ್ರಕಾಶ್‌ ಮಾತನಾಡಿ, ‘ಇಂದಿರಾ ಗಾಂಧಿ ಈ ದೇಶ ಕಂಡ ಮಹಾನ್‌ ನಾಯಕಿ. ತುರ್ತು ಪರಿಸ್ಥಿತಿ ವೇಳೆ ದೇಶವನ್ನು ಸಮಾಜಮುಖಿಯಾಗಿ ಮುನ್ನೆಡೆಸಿದ ದಿಟ್ಟ ಮಹಿಳೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.