ADVERTISEMENT

ಕುಡಿಯುವ ನೀರು ಪೂರೈಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 8:43 IST
Last Updated 20 ಜನವರಿ 2017, 8:43 IST

ಚಿತ್ರದುರ್ಗ: ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹುಲ್ಲೇಹಾಳ್‌ ಗ್ರಾಮಸ್ಥರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ  ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಭರಮಸಾಗರ ಹೋಬಳಿಯ ಯಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಹುಲ್ಲೇಹಾಳ್‌ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

‘ಗ್ರಾಮದಲ್ಲಿ  ಸುಮಾರು 3.5 ಸಾವಿರ ಜನಸಂಖ್ಯೆ ಇದೆ. 3 ಸಾವಿರ ಜಾನುವಾರುಗಳಿದ್ದು, ಒಂದು ತಿಂಗಳಿನಿಂದ ನೀರಿಗಾಗಿ ಹಪಾ ಹಪಿಸುತ್ತಿದ್ದೇವೆ. ಪದೇ ಪದೆ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ’ ಎಂದು  ಅಳಲು ತೋಡಿಕೊಂಡರು.

‘ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ ನಂತರ ಇಲಾಖೆಯವರು ಒಂದು ಕೊಳವೆಬಾವಿ ಕೊರೆಸಿದರು. ಆದರೆ, ಕೊರೆಸಿ ಎಂಟು ತಿಂಗಳಾದರೂ ಅಗತ್ಯ ಪರಿಕರ ಮಂಜೂರು ಮಾಡಲಿಲ್ಲ’ ಎಂದು ದೂರಿದರು.

‘ಪಂಚಾಯ್ತಿಯಿಂದಲೇ ಕೊಳವೆ ಬಾವಿಗೆ ಮೋಟಾರ್‌ ಪಂಪ್ ಅಳವಡಿಸಿ ತಾತ್ಕಾಲಿಕ ಪೈಪ್‌ಲೈನ್ ಅಳವಡಿಸಿಕೊಂಡಿದ್ದೇವೆ. ಆದರೆ, ಈಗ ಅದು ಕೂಡ ಬತ್ತಿ ಹೋಗಿದೆ. ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.
‘ನೀರಿನ ಸಮಸ್ಯೆ ನಿವಾರಿಸಲು ಕೂಡಲೇ ಎರಡು ಕೊಳವೆಬಾವಿ ಕೊರೆಸಬೇಕು’ ಎಂದು ಜಿಲ್ಲಾಡಳಿತಕ್ಕೆ ಕೋರಿದರು.

ಗ್ರಾಮಸ್ಥರಾದ ಶಿವಕುಮಾರ್, ತಿಪ್ಪೇಶ್, ಚನ್ನಬಸಪ್ಪ, ನಾಗರಾಜಪ್ಪ, ಮಲ್ಲಿಕಾರ್ಜುನಪ್ಪ, ಸಿದ್ದಪ್ಪ, ಮಂಜುಳಾ, ಶಾರದಮ್ಮ, ರೇಣುಕಮ್ಮ, ಸಾವಿತ್ರಮ್ಮ, ವನಜಾಕ್ಷಮ್ಮ, ಶಕುಂತಲಾ ಸೇರಿದಂತೆ  ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.