ADVERTISEMENT

ಕೃಷಿ, ಕೃಷಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿ

ಬಬ್ಬೂರು: ಕಾರ್ಯಾಗಾರದಲ್ಲಿ ಕನಕದುರ್ಗ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:05 IST
Last Updated 8 ಫೆಬ್ರುವರಿ 2017, 6:05 IST

ಹಿರಿಯೂರು:  ‘ದೇಶದ ಬೆನ್ನೆಲುಬು ಕೃಷಿ ಎಂದು ಎಲ್ಲರೂ ಹೇಳುತ್ತಿದ್ದು, ಕೃಷಿ ಉಳಿಯಬೇಕೆಂದರೆ ಕೃಷಿ ಹಾಗೂ ಕೃಷಿಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸ
ಬೇಕು’ ಎಂದು ಹೈದರಾಬಾದ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಅಧಿಕಾರಿ ಡಾ. ಕನಕದುರ್ಗ ಸಲಹೆ ನೀಡಿದರು.

ತಾಲ್ಲೂಕಿನ ಬಬ್ಬೂರು ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಈಚೆಗೆ ಹೈದರಾಬಾದ್ ಮ್ಯಾನೇಜ್ ಸಂಸ್ಥೆಯ ಸಹಯೋಗದಲ್ಲಿ ‘ಕೃಷಿಯತ್ತ ಯುವಕರನ್ನು ಸೆಳೆಯುವ ತಂತ್ರಗಾರಿಕೆ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಸ ಹೊಸ ತಳಿಗಳನ್ನು ಆವಿಷ್ಕರಿಸುವ ಮೂಲಕ ಕೃಷಿಯನ್ನು ಲಾಭದತ್ತ ಒಯ್ಯಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಇಲ್ಲವಾದಲ್ಲಿ ಯುವಕರು ಖಂಡಿತಾ ಕೃಷಿಯಿಂದ ವಿಮುಖರಾಗುತ್ತಾರೆ’ ಎಂದು ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ್ ಮಾತನಾಡಿ, ‘ತರಬೇತಿ ವಿಷಯ ಹೊಸದಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತರಬೇತಿಯ ಉಪಯೋಗ ಪಡೆದು ಹೆಚ್ಚಿನ ಪ್ರಚಾರ ಕೊಡಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಆರ್.ಬಸವರಾಜಪ್ಪ ಮಾತನಾಡಿ, ‘ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಸಂಶೋಧನೆಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳ ಪಾತ್ರ ಅತಿ ಮುಖ್ಯ. ಕೃಷಿಯನ್ನು ಲಾಭದಾಯಕವಾಗಿಸಲು ನಮ್ಮ ದೇಶಕ್ಕೆ ಕೃಷಿಯ ಅನಿವಾರ್ಯತೆ ಬಗ್ಗೆ ಗ್ರಾಮಮಟ್ಟದಲ್ಲಿ ಯುವಕರಿಗೆ ಮನದಟ್ಟು ಮಾಡಿಕೊಡಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಡಾ.ಕೆ. ಅಮರೇಶ್ ಕುಮಾರ್, ಡಾ.ಸುರೇಶ ಏಕಬೋಟೆ, ಡಾ.ರವೀಶ, ಡಾ.ಸುಮನ, ಡಾ. ಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.