ನಾಯಕನಹಟ್ಟಿ: ‘ಕನಿಷ್ಠಮಟ್ಟದ ಅಕ್ಷರ ಜ್ಞಾನದಿಂದ ರೈತರು ಸಾರ್ವಜನಿಕ ಜೀವನದಲ್ಲಿ ಉತ್ತಮವಾದ ನಡೆ–ನುಡಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಹಿರೇಕೆರೆ ಕಾವಲು ಚೌಡೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಹೇಳಿದರು. ಸಮೀಪದ ಹಿರೇಕೆರೆ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ಇರುವ ಗೋಶಾಲೆಯಲ್ಲಿ ಶುಕ್ರವಾರ ಲೋಕಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ಗೋಶಾಲಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅನಕ್ಷರಸ್ಥರಾದರೆ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ. ವಿದ್ಯಾಭ್ಯಾಸದಿಂದ ಜೀವನದಲ್ಲಿ ಶಿಸ್ತು ಮೂಡುತ್ತದೆ. ಅಕ್ಷರಜ್ಞಾನ ಇಂದು ಅವಶ್ಯ. ಸರ್ಕಾರ ನಿಮ್ಮ ರಾಸುಗಳಿಗೆ ಮೇವು ನೀಡುವುದಲ್ಲದೇ ನಿಮಗೆ ಅಕ್ಷರ ಜ್ಞಾನ ನೀಡಲು ಮುಂದಾಗಿರುವುದು ಸಂತೋಷದ ವಿಷಯ. ವಿದ್ಯಾವಂತರು ಅನಕ್ಷರಸ್ಥರಿಗೆ ಅಕ್ಷರ ಕಲಿಸಲು ನೆರವಾಗಬೇಕು. ರಾಸು
ಗಳಿಗೆ ಮೇವು ಹಾಕಿ ಕಲಿಕಾ ಕೇಂದ್ರದಲ್ಲಿ ಅಕ್ಷರ ಜ್ಞಾನ ಪಡೆಯಿರಿ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ವೈ.ಟಿ.ಸ್ವಾಮಿ ಮಾತನಾಡಿ, ‘ಲೋಕಶಿಕ್ಷಣ ಸಮಿತಿಯಿಂದ ತಾಲ್ಲೂಕಿನಲ್ಲಿರುವ ಗೋಶಾಲೆಯಲ್ಲಿ ಕಲಿಕಾ ಕೇಂದ್ರ ತೆರೆದು ರೈತರಿಗೆ ಅಕ್ಷರಾಭ್ಯಾಸ ನೀಡಲು ಮುಂದಾಗಿರುವುದು ವಿನೂತನ ಪ್ರಯತ್ನವಾಗಿದೆ’ ಎಂದರು.ನಿವೃತ್ತ ಶಿಕ್ಷಕ ಎನ್.ಪಿ.ವಿಶ್ವೇಶ್ವರಯ್ಯ, ಲೋಕಶಿಕ್ಷಣ ಕೇಂದ್ರದ ತಿಪ್ಪೇಸ್ವಾಮಿ, ನಾಗರತ್ನ, ಗ್ರಾಮ ಲೆಕ್ಕಾಧಿಕಾರಿ ಗೀತಮ್ಮ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ನೂರಾರು ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.