ADVERTISEMENT

ಚಿಕ್ಕಜಾಜೂರು: ಶುದ್ಧ ನೀರಿನ ಘಟಕ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 9:25 IST
Last Updated 4 ಸೆಪ್ಟೆಂಬರ್ 2017, 9:25 IST

ಚಿಕ್ಕಜಾಜೂರು: ಕಳೆದ ಆರೇಳು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಉಲ್ಬಣಿಸುತ್ತಿದೆ. ಶುದ್ಧೀಕರಣ ಘಟಕಗಳಿಂದ ಇಡೀ ಗ್ರಾಮಸ್ಥರಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಾರ್ಚ್‌ ತಿಂಗಳ ಮೊದಲು ಶಾಂತಿಸಾಗರದ ಕೆರೆಯಿಂದ ನೀರು ಬರುತ್ತಿತ್ತು. ಆದರೆ, ಕೆರೆಯಲ್ಲಿ ನೀರು ಬರಿದಾದ ನಂತರ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಜಗಳೂರು ತಾಲ್ಲೂಕುಗಳಿಗೆ ಸರಬರಾಜು ಆಗುತ್ತಿದ್ದ ನೀರು ಸ್ಥಗಿತಗೊಂಡಿದೆ. ಇದರಿಂದ ಈ ತಾಲ್ಲೂಕುಗಳ ಸಾವಿರಾರು ಜನರು ನಿತ್ಯ ಕುಡಿಯುವ ಮತ್ತು ಬಳಕೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆದರೂ ಶಾಂತಿ ಸಾಗರಕ್ಕೆ ಸರ್ಕಾರ ಇನ್ನೂ ನೀರನ್ನು ಹರಿಸದೇ ಇರುವುದು ದುರಂತ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶುದ್ಧೀಕರಣ ಘಟಕವೇ ಆಸರೆ: ಕಳೆದ ಹಲವು ತಿಂಗಳಿಂದ ಕುಡಿಯುವ ನೀರಿಗಾಗಿ ಬಿ.ದುರ್ಗ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ, ಜನರು ಶುದ್ಧೀಕರಣ ಘಟಕಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಹಲವು ಗ್ರಾಮಗಳಲ್ಲಿ ಶುದ್ಧೀಕರಣ ಘಟಕಗಳು ಕೆಟ್ಟಿದ್ದು, ಕಾರ್ಯನಿರ್ವಹಿಸುತ್ತಿಲ್ಲ. ಮತ್ತೆ ಕೆಲವೆಡೆ ಗಂಟೆಗಟ್ಟಲೆ ಕಾಯುವಂತಾಗಿದೆ. ಇನ್ನು ಕೆಲವೆಡೆ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಭದ್ರಾ ನೀರು ಹರಿಸಲು ಒತ್ತಾಯ: ಸಿಹಿ ನೀರು ಸಿಗದೆ, ಜನ ಸಪ್ಪೆ ನೀರನ್ನೇ ಅವಲಂಬಿಸುವಂತಾಗಿದೆ. ಇಷ್ಟಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ದುರ್ದೈವದ ಸಂಗತಿ. ಜನಪ್ರತಿನಿಧಿಗಳು ಶಾಂತಿ ಸಾಗರಕ್ಕೆ ನೀರು ಹರಿಸದಿರುವುದು ವಿಷಾದದ ಸಂಗತಿ. ಇನ್ನಾದರೂ ಶಾಸಕರು, ಸಚಿವರು ಸರ್ಕಾರದ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು, ಶಾಂತಿ ಸಾಗರಕ್ಕೆ ನೀರನ್ನು ಹರಿಸಬೇಕು ಎಂದು ಬಿ.ದುರ್ಗು ಹೋಬಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.