ಹೊಸದುರ್ಗ: ತಾಯಿ ನಾಡಿನ ಅಭಿಮಾನ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ತಿಳಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪಟ್ಟಣದ ವಾಣಿವಿಲಾಸ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂರಾರು ಶ್ರೇಷ್ಠ ದಾರ್ಶನಿಕರಿಗೆ, ಸಾಹಿತಿಗಳಿಗೆ, ವಚನಕಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಕನ್ನಡ ನಾಡಾಗಿದೆ. ಇಲ್ಲಿ ಅನೇಕ ನದಿಗಳು ಹುಟ್ಟಿ ಹರಿಯುತ್ತಿವೆ. ಜಾನಪದ, ಶಿಲ್ಪಕಲೆ, ಸಂಗೀತ, ಸಾಹಿತ್ಯದಿಂದ ಕೂಡಿದ ಸಂಪತ್ ಭರಿತವಾದ ಪ್ರದೇಶ ನಮ್ಮದಾಗಿದೆ. ಜೀವನದಲ್ಲಿ ಒಮ್ಮೆ ನಾಡಿನ ಉದ್ದಗಲಕ್ಕೂ ಸಂಚರಿಸಿ ಅದರ ಸವಿ ಸವಿಯಬೇಕು. ಕನ್ನಡ ಭಾಷೆಯನ್ನು ನಿರ್ಲಕ್ಷಿಸದೇ ನಿತ್ಯ ಮನೆ, ಮನಗಳಲ್ಲಿ ಮಾತನಾಡುತ್ತಿರಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬಿ.ಜಿ.ವೆಂಕಟೇಶ್, ಮಾನಸಿಕ ಆರೋಗ್ಯ ವಿಷಯ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೆಂಗಸಂದ್ರ ಧನಂಜಯ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಸಾಹಿತಿ ಮೈಲಾರಪ್ಪ ಮಾತನಾಡಿದರು.
ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ರಮೇಶ್ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಸಬೀನಾಬಾನು, ಪೀಲಾಪುರ ಕಂಠೇಶ್, ಕನಕ ನೌಕರರ ಸಂಘದ ಅಧ್ಯಕ್ಷ ಎಂ.ಶಶಿಧರ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ರಂಗಸ್ವಾಮಿ, ನಿವೃತ್ತ ಕಸಾಪ ಗೌರವ ಕಾರ್ಯದರರ್ಶಿ ಗುರುಮೂರ್ತಿ, ಕೋಶಾಧ್ಯಕ್ಷ ರುದ್ರಸ್ವಾಮಿ, ವೀರಭದ್ರಪ್ಪ, ಬಿ.ವಿ.ಲವಕುಮಾರ್, ಚಂದ್ರಶೇಖರ್, ಇಸ್ಮಾಯಿಲ್ ಜಬೀಉಲ್ಲಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.