ಚಿತ್ರದುರ್ಗ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರ ಮುಂಬಡ್ತಿ ಮೀಸಲಾತಿ ಮಸೂದೆ ಜಾರಿಗೆ ಒತ್ತಾಯಿಸಿರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಒಕ್ಕೂಟ ಶನಿವಾರ ಪ್ರತಿಭಟನೆ ನಡೆಸಿತು.
ಮೆರವಣಿಗೆ ನಡೆಸಿದ ಬಳಿಕ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ತಮ್ಮ ಬೇಡಿಕೆ ಈಡೇರಿಸಬೇಕು ಎಂದು ರಾಷ್ಟ್ರಪತಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.
‘ನಮ್ಮ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರವೂ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳಿಸಿತು. ಆದರೆ, ಅವರು ಉಭಯ ಸದನಗಳಲ್ಲಿ ಮಸೂದೆ ಮಂಡಿಸಿ ಅಂಗೀಕರಿಸಿದ ನಂತರ ತರುವಂತೆ ನಿರ್ದೇಶಿಸಿದರು. ಅಲ್ಲಿಂದ ಬಂದ ನಂತರವೂ ರಾಜ್ಯಪಾಲರು ಅನುಮೋದಿಸದೆ ಇರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರಿಗೆ ಆಘಾತವನ್ನುಂಟು ಮಾಡಿದೆ’ ಎಂದು ಹೇಳಿದರು.
‘ಇನ್ನಾದರೂ ನಮ್ಮ ಮನವಿಗೆ ಸ್ಪಂದಿಸುವ ಮೂಲಕ ರಾಷ್ಟ್ರಪತಿ ಅವರು ಒಪ್ಪಿಗೆ ನೀಡಬೇಕು’ ಎಂದು ನೌಕರರು ಇದೇ ಸಂದರ್ಭದಲ್ಲಿ ಕೋರಿದರು. ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಕಮಾನಿ, ಡಿಡಿಪಿಐ ಎಂ.ರೇವಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಶಿಕ್ಷಣ ಇಲಾಖೆ, ಕಂದಾಯ, ನಗರಸಭೆ, ವಿವಿಧ ಇಲಾಖೆಗಳ ಎಸ್ಸಿ, ಎಸ್ಟಿ ನೌಕರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.