ADVERTISEMENT

ರಾಷ್ಟ್ರಕವಿ ಕುವೆಂಪು, ನಟ ವಿಷ್ಣುವರ್ಧನ್ ಸ್ಮರಣೆ

ಕೆಎಸ್‍ಆರ್‌ಟಿಸಿ ನಗರ ಸಾರಿಗೆ ಪ್ರಯಾಣಿಕರೊಂದಿಗೆ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 9:09 IST
Last Updated 31 ಡಿಸೆಂಬರ್ 2017, 9:09 IST

ಚಿತ್ರದುರ್ಗ: ಇಲ್ಲಿನ ಹಲವೆಡೆ ಶನಿವಾರ ರಾಷ್ಟ್ರಕವಿ ಕುವೆಂಪು ಹಾಗೂ ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಅವರನ್ನು ಅಭಿಮಾನಿಗಳು ಸ್ಮರಿಸಿದರು.

ಇಲ್ಲಿನ ತುರುವನೂರು ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಡಾ.ವಿಷ್ಣುವರ್ಧನ್ ಅವರ ಆದರ್ಶ ಬಳಗದಿಂದ ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಬಳಗದ ರಾಜ್ಯ ಅಧ್ಯಕ್ಷ ಸಿ.ಕೆ.ಗೌಸ್‍ ಪೀರ್ ಮಾತನಾಡಿ, ನಾಗರಹಾವು ಚಿತ್ರದ ಮೂಲಕ ಚಿತ್ರದುರ್ಗದ ಕೋಟೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಡಾ.ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಲ್ ಅವರಿಗೆ ಸಲ್ಲುತ್ತದೆ ಎಂದರು.

ADVERTISEMENT

ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ವಿಷ್ಣುವರ್ಧನ್ ಅವರು ಇಂದಿಗೂ ಉಳಿದಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಅವರು ನೀಡಿರುವ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎಂದು ಸ್ಮರಿಸಿದರು.

ಬಳಗದ ಸಂಘಟನಾ ಕಾರ್ಯದರ್ಶಿಗಳಾದ ಪುನೀತ್, ಬಾಬು, ತಿಪ್ಪೇಸ್ವಾಮಿ, ಜಿಕ್ರಿಯ, ಶೇಖ್‍ ಕಲೀಂ, ರಘು ಮದಕರಿಪುರ, ಖಜಾಂಚಿ ದ್ವಾರಕನಾಥ್, ರಘು, ರಾಜಕುಮಾರ್, ನಗರಸಭೆ ಪೌರ ನೌಕರರು ಇದ್ದರು.

ಮಠದ ಕುರುಬರಹಟ್ಟಿಯಲ್ಲೂ ಸ್ಮರಣೆ:  ಐಯುಡಿಪಿ ಬಡಾವಣೆಯಿಂದ ಮಠದ ಕುರುಬರ ಹಟ್ಟಿಗೆ ಸಂಚರಿಸುವ ಕೆ.ಎಸ್‍.ಆರ್‍.ಟಿ.ಸಿ. ನಿಗಮದ ನಗರಸಾರಿಗೆ ವಾಹನದ ಚಾಲಕ ನಟರಾಜ್‍ ಸೇರಿದಂತೆ ವಾಹನದೊಳಗಿದ್ದ ಎಲ್ಲರೂ ಕೆಳಗಿಳಿದು ರಾಷ್ಟ್ರಕವಿ ಕುವೆಂಪು ಹಾಗೂ ವಿಷ್ಣುವರ್ಧನ್ ಅವರನ್ನು ಸ್ಮರಿಸಿದರು.

ವಿಠ್ಠಲ್, ಅಶೋಕ್, ಶಾಲಾ ಮಕ್ಕಳು, ಪ್ರಯಾಣಿಕರು ಇದ್ದರು.

ಕುವೆಂಪು ಕೊಡುಗೆ ಅಪಾರ: ಕುವೆಂಪು ಅವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಪ್ರೊ.ಲಿಂಗಪ್ಪ ತಿಳಿಸಿದರು.

ಇಲ್ಲಿನ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯದಲ್ಲಿ ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘ, ನಗರ ಕೇಂದ್ರ ಗ್ರಂಥಾಲಯದಿಂದ ನಡೆದ ಕುವೆಂಪು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರಸಭೆ ಉಪಾಧ್ಯಕ್ಷೆ ಶಾಂತಕುಮಾರಿ ಉದ್ಘಾಟಿಸಿದರು. ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಗುರುನಾಥ್, ಗ್ರಂಥಾಲಯದ ಸದಸ್ಯ ಪ್ರತಾಪ್ ಜೋಗಿ, ವಕೀಲ ಎನ್.ಜಿ.ಕೆ.ಕೃಷ್ಣಮೂರ್ತಿ, ಸರ್ವ ಶಿಕ್ಷಾ ಅಭಿಯಾನದ ನಿವೃತ್ತ ನಿರ್ದೇಶಕ ಮಲ್ಲಣ್ಣ, ದಸಂಸ ಎನ್.ಮೂರ್ತಿ ಬಣದ ಅಧ್ಯಕ್ಷ ಪ್ರಕಾಶ್ ಬೀರಾವರ್, ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು. ಹರೀಶ್ ಪ್ರಾರ್ಥಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಗೋಪಾಲ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.