ADVERTISEMENT

ವಿದ್ಯುತ್‌ ಮಗ್ಗ ನಿರ್ಮಾಣಕ್ಕೆ ₹ 2 ಕೋಟಿ

ಎಸ್‌.ಸುರೇಶ್‌
Published 17 ಮಾರ್ಚ್ 2017, 4:32 IST
Last Updated 17 ಮಾರ್ಚ್ 2017, 4:32 IST

ಹೊಸದುರ್ಗ: ಪಟ್ಟಣದಲ್ಲಿ ವಿದ್ಯುತ್‌ ಮಗ್ಗದ ಸಂಕೀರ್ಣ ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ₹ 2 ಕೋಟಿ ಅನುದಾನ ನೀಡಿದ್ದಾರೆ.

ಪಟ್ಟಣದ ಹೊರವಲಯದ ಹಿರಿಯೂರು ರಸ್ತೆಯಲ್ಲಿ ಅತಿಕ್ರಮ ವಾಗಿದ್ದ ಒಟ್ಟು 8 ಎಕರೆ ಜಮೀನನ್ನು ಈ ಉದ್ದೇಶಕ್ಕಾಗಿ ಹೀಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಸ್ಥಳದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನೇಕಾರರಿಗೆ 60ಕ್ಕೂ ಅಧಿಕ ವಸತಿ, ವಿದ್ಯುತ್‌ ಮಗ್ಗ ತರಬೇತಿ ಕೇಂದ್ರ, ನೇಕಾರಿಕೆ ಕಾರ್ಯಾಗಾರ, ಕಚೇರಿ ಹಾಗೂ ಶೆಡ್ ನಿರ್ಮಿಸುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

ಹಾಗೆಯೇ ಅರಳಿಹಳ್ಳಿ ಸಮೀಪ ಗುರುತಿಸಿರುವ 25 ಎಕರೆ ಜಮೀನಿನಲ್ಲಿ ₹ 10 ಕೋಟಿಗೂ ಅಧಿಕ ವೆಚ್ಚದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಬೃಹತ್‌ ಜವಳಿ ಉದ್ಯಮ ಹಾಗೂ ಪಾರ್ಕ್‌ ನಿರ್ಮಿಸಲು ಯೋಜನೆ ರೂಪಿಸಲಾಗುವುದು.

ADVERTISEMENT

ತಾಲ್ಲೂಕಿನ ಬಹುತೇಕ ಹಳ್ಳಿಯ ಯುವಕ- ಯುವತಿಯರು ಉದ್ಯೋಗ ಹರಸಿ ಬೆಂಗಳೂರಿನತ್ತ ವಲಸೆ ಹೋಗಿ ಅಲ್ಲಿನ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿದ್ದಾರೆ.
ಅಂತವರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲಾಗುವುದು. 

ಇದೇ ರೀತಿಯಲ್ಲಿ ರಾಜ್ಯದ ಬನಹಟ್ಟಿ, ಹಾವೇರಿ ಹಾಗೂ ಗೌರಿಬಿದನೂರಿನಲ್ಲಿ ತಲಾ ₹ 2 ಕೋಟಿ ವೆಚ್ಚದಲ್ಲಿ ವಿದ್ಯುತ್‌ ಮಗ್ಗಗಳ ಸಂಕೀರ್ಣ ನಿರ್ಮಿಸಲಾಗುವುದು.
ನೇಕಾರರ ಸಾಂದ್ರತೆ ಹೆಚ್ಚಿಗೆ ಇರುವ ಬೆಳಗಾಂ, ಬೆಟಗೇರಿ, ಕೊಪ್ಪಳ, ಚಾಮರಾಜನಗದಲ್ಲಿ ಜವಳಿ ಉತ್ಪಾದನಾ ತರಬೇತಿ ಕೇಂದ್ರ ಈ ಬಾರಿ ಬಜೆಟ್‌ನಲ್ಲಿ ₹ 22 ಕೋಟಿ ಅನುದಾನ ಮೀಸಲಿಡಲಾಗಿದೆ.

ಜವಳಿ ತರಬೇತಿ ಕೇಂದ್ರದಲ್ಲಿ ಜವಳಿ ಉತ್ಪಾದನೆಯ ಎಲ್ಲಾ ಪರಿಕರಗಳ ಪೂರೈಕೆ, ಗಾರ್ಮೆಂಟ್ಸ್, ವಿವಿಂಗ್, ಬಣ್ಣದ ತರಬೇತಿ, ವಾರ್ಪಿಂಗ್ ಹಾಗೂ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.

ನೇಕಾರರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಮಗ್ಗಗಳ ಘಟಕಗಳಿಗೆ ಶೇ 50ರಷ್ಟು ಸಹಾಯಧನದೊಡನೆ ಸೌರಶಕ್ತಿ ಉಪಕರಣ ಒದಗಿಸುವುದು ಸೇರಿದಂತೆ ಹತ್ತು ಹಲವು  ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗಿದೆ ಎಂದು ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್  ಅವರು ವಿವರಿಸಿದರು.

**

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನಪರ ಆಡಳಿತ ನೀಡುತ್ತಿದ್ದು ನೇಕಾರರ ಅಭಿ ವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.
–ಗೋ.ತಿಪ್ಪೇಶ್,  ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.