ADVERTISEMENT

ಶಾಲೆಯ ಚಾವಣಿ ತುಂಬ ಒಡೆದ ಹೆಂಚು

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:26 IST
Last Updated 12 ಜುಲೈ 2017, 5:26 IST

ಪರಶುರಾಂಪುರ: ಮಳೆ ನೀರಿನಿಂದ ರಕ್ಷಣೆ ನೀಡಬೇಕಿದ್ದ ಚಾವಣಿ ಸೋರುತ್ತಿದೆ. ಮಕ್ಕಳ ಬಿಸಿಯೂಟದ ಪರಿಕರಗಳ ದಾಸ್ತಾನು ಕೋಣೆಯೇ ಶಿಕ್ಷಕರ ಕಚೇರಿಯಾಗಿದೆ!
ಹೋಬಳಿಯ ಪಿ.ಓಬನಹಳ್ಳಿಯ ಭೋವಿ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು. ಆಂಧ್ರಪ್ರದೇಶದ ಗಡಿಭಾಗದ ಇಲ್ಲಿರುವ ಈ ಊರಿನ 250 ಮನೆಗಳಿಂದ 155 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಶೋಚನೀಯ ಸ್ಥಿತಿ: ಶಾಲೆಯ ಹೊರ ಆವರಣದ ಚಾವಣಿಗೆ ಹಾಕಿದ ಸಿಮೆಂಟ್ ಶೀಟ್‌ಗಳು ಒಡೆದಿವೆ. ಇದೇ ರೀತಿ ಕೊಠಡಿಗಳ ಮೇಲೆ ಹೊದಿಸಿದ್ದ ಹೆಂಚುಗಳೂ ಬಿರುಕುಬಿಟ್ಟಿವೆ. ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶಾಲೆಯ ಪಕ್ಕದಲ್ಲೇ ಇರುವ ನೀರಿನ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು ಆತಂಕಕ್ಕೆ ಕಾರಣವಾಗಿದೆ.

ಭೋವಿ ಕಾಲೊನಿಯಲ್ಲಿ ಗ್ರಾಮ ಪಂಚಾಯ್ತಿಯ ಮೂವರು ಸದಸ್ಯರು ಹಾಗೂ ಒಬ್ಬರು ತಾಲ್ಲೂಕು ಪಂಚಾಯ್ತಿ ಸದಸ್ಯರು ಇದ್ದಾರೆ. ಆದರೂ ಶಾಲೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಸದಸ್ಯೆ ಹನುಮಕ್ಕ ಜಯಣ್ಣ, ‘ಓಬನಹಳ್ಳಿ ಭೋವಿ ಕಾಲೊನಿಯಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಶೈಕ್ಷಣಿಕ ಮೂಲ ಸೌಕರ್ಯ ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು. ಶೀಘ್ರವೇ ಶಾಲೆಯ ಚಾವಣಿ ದುರಸ್ತಿ ಮಾಡಿಸಲಿ’ ಎಂದು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.