ADVERTISEMENT

‘ಶಿಕ್ಷಕರಿಂದ ಜಲಜಾಗೃತಿ ಮೂಡಿಸಲು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:30 IST
Last Updated 24 ಮಾರ್ಚ್ 2017, 5:30 IST

ಚಿತ್ರದುರ್ಗ: ‘ಜಲಜಾಗೃತಿಯಂತಹ ಕಾರ್ಯಕ್ರಮಗಳು ಶಿಕ್ಷಕರಿಂದಲೇ ಆರಂಭವಾಗಬೇಕು’ ಎಂದು ವಿಜ್ಞಾನ ಸಂವಹನಕಾರ  ಪ್ರೊ. ಸಿ.ಡಿ.ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಜಲ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಪಂಚದಲ್ಲಿ ಏನಾದರೂ ಬದಲಾವಣೆ ಆಗಬೇಕೆಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಏಕೆಂದರೆ ಶಿಕ್ಷಕರ ಮಾತಿಗೆ ಅಂಥ ಮಾಂತ್ರಿಕ ಶಕ್ತಿ ಇದೆ. ಶಿಕ್ಷಕರ ಮಾತನ್ನು ವಿದ್ಯಾರ್ಥಿಗಳು ಪಾಲಿಸುತ್ತಾರೆ ಹಾಗೂ ಸಮಾಜವೂ ಕೇಳುತ್ತದೆ’ ಎಂದು ವಿವರಿಸಿದರು.
‘ನೀರು ಭೂಮಿ ಮೇಲಿನ ಸಕಲ ಜೀವರಾಶಿಗಳಿಗೂ ಬೇಕು. ನೀರನ್ನು ಎಲ್ಲರೂ ಸಮಾನವಾಗಿ ಹಂಚಿ ಕೊಳ್ಳಬೇಕು. ಶುದ್ಧ ನೀರಿಗೆ ವಾಸನೆ, ಬಣ್ಣ, ರುಚಿ ಇರುವುದಿಲ್ಲ. ಎಲ್ಲ ಕಡೆ ನೀರಿದೆ. ಆದರೆ ಕುಡಿಯಲು ಯೋಗ್ಯ ವಾದ ನೀರು ಲಭ್ಯವಿಲ್ಲ ದಿರುವುದು ನೋವಿನ ಸಂಗತಿ’ ಎಂದರು.

‘ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 1,284 ಮಿ.ಮೀ.ಮಳೆ ಬೀಳುತ್ತದೆ. ಬಾಗಲಕೋಟೆ ಅತ್ಯಂತ ಕಡಿಮೆ ಅಂದರೆ ವರ್ಷಕ್ಕೆ 562 ಮಿ.ಮೀ ಮಳೆಯಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವರ್ಷಕ್ಕೆ 570 ಮಿ.ಮೀ. ಮಳೆಯಾಗುತ್ತದೆ. ಮಳೆ ಬಿದ್ದಾಗ ಒಂದು ಲಕ್ಷ 27 ಸಾವಿರದ 110 ಲೀಟರ್ ನೀರನ್ನು ಸಂಗ್ರಹಿಸಿದರೆ ಸೂರ್ಯ ಚಂದ್ರ ಇರುವತನಕ ನೀರಿನ ಸಮಸ್ಯೆ ಎದುರಾಗುವುದಿಲ್ಲ’ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಂಕರಪ್ಪ ಮಾತನಾಡಿ, ‘ಓಜೋನ್ ಪದರ ತೆಳವಾಗುತ್ತಿದ್ದು, ಅತಿನೇರಳ ಕಿರಣಗಳು ವಾತಾವರಣಕ್ಕೆ ಸೇರಿಕೊಂಡು ಪರಿಸರಲ್ಲಿ ಅಸಮತೋಲನ ಉಂಟಾಗುತ್ತಿದೆ.

ಹವಾಮಾನ ವೈಪರೀತ್ಯದಂತಹ ಸಮಸ್ಯೆ ಎದುರಾಗುತ್ತಿದೆ’ ಎಂದರು. ‘ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಅಕಾಲಿಕ ಮಳೆ, ತೀವ್ರತರಹದ ಬರಗಾಲ ಎಲ್ಲವೂ ಹವಾಮಾನ ವೈಪರೀತ್ಯದ ಪರಿಣಾಮ’ ಎಂದರು. ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.