ADVERTISEMENT

ಶಿಕ್ಷಕರ ಕ್ಷೇತ್ರದ ಫಲಿತಾಂಶ: ಭವಿಷ್ಯದ ದಿಕ್ಸೂಚಿ

ಜೆಡಿಎಸ್ ಜಿಲ್ಲಾ ಘಟಕ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಬಿ.ಕಾಂತರಾಜ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:07 IST
Last Updated 8 ಫೆಬ್ರುವರಿ 2017, 6:07 IST

ಚಿತ್ರದುರ್ಗ: ‘ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕ ಮತದಾರರು ಜೆಡಿಎಸ್ ಅಭ್ಯರ್ಥಿ ರಮೇಶ್‌ ಬಾಬು ಅವರನ್ನು ಗೆಲ್ಲಿಸುವ ಮೂಲಕ ಮುಂದಿನ ಚುನಾವಣೆಗೆ ಹೊಸ ದಿಕ್ಸೂಚಿಯನ್ನೇ ನೀಡಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಕಾಂತರಾಜ್ ಹರ್ಷ ವ್ಯಕ್ತಪಡಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್‌ಬಾಬು ಗೆಲುವು ಸಾಧಿಸಿದ ಕಾರಣ ನಗರದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರ ಜತೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಜೆಡಿಎಸ್ ಪರವಾಗಿ ಮತದಾರರಿದ್ದಾರೆ ಎಂಬುದನ್ನು ಈ ಚುನಾವಣೆ ತೋರಿಸಿದೆ. ಭವಿಷ್ಯದ ಚುನಾವಣೆಗೆ ಇದೊಂದು ಉತ್ತಮ ಅಡಿಗಲ್ಲಾಗಿದೆ. ರಾಜ್ಯದ ಅಭಿವೃದ್ದಿಗೆ ಈ ಫಲಿತಾಂಶ ಪೂರಕವಾಗಿದೆ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯಲು ಈ ಫಲಿತಾಂಶ ನೆರವಾಗಲಿದೆ’ ಎಂದರು.

‘ಜೆಡಿಎಸ್ ಪಕ್ಷದಲ್ಲಿ ಗಟ್ಟಿ ಕಾರ್ಯಕರ್ತರಿದ್ದಾರೆ. ನಮ್ಮ ಪಕ್ಷದಲ್ಲಿ ಬೇರೆ ಕಡೆಯಲ್ಲಿದ್ದಂತೆ ಆರಂಭ ಶೂರತ್ವವಿಲ್ಲ. ನಮ್ಮದು ನೈಜ ಅಭಿವೃದ್ಧಿಗಾಗಿ ದುಡಿ
ಯುವ ಪಕ್ಷ. ಅದನ್ನು ಈ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಮತದಾರರು ತೋರಿಸಿದ್ದಾರೆ’ ಎಂದು ಹೇಳಿದರು.

‘ಜೆಡಿಎಸ್‌ನಿಂದ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಎಚ್.ಎಸ್.ಅರವಿಂದ್ ಸ್ಪರ್ಧಿಸಿದ್ದರು. ಅವರನ್ನು ಹಾಗೂ ಅವರ ಸಹೋದರ, ಶಾಸಕ ಎಚ್.ಎಸ್.ಶಿವಶಂಕರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವೊಲಿಸಿದರು. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಲು ಕಾರಣವಾಯಿತು’ ಎಂದರು.

ಇದಕ್ಕೂ ಮುನ್ನ ಕಾರ್ಯಕರ್ತರು ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ,ಪಕ್ಷದ ಪರ ಘೋಷಣೆ ಕೂಗಿ ಸಿಹಿ ಹಂಚಿದರು.ನಗರಸಭೆ ಸದಸ್ಯರಾದ ತಿಮ್ಮಣ್ಣ, ತಿಪ್ಪೇಸ್ವಾಮಿ, ರಾಜೇಶ್, ನಸ್ರುಲ್ಲಾ, ಜೆಡಿಎಸ್ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ನಿಸಾರ್, ಗುರುಸಿದ್ದಪ್ಪ, ಪ್ರತಾಪ್‌ಜೋಗಿ, ನಿಶಾನಿಶಂಕರ್, ನವೀನ್, ಲಕ್ಷ್ಮಿಸಾಗರ್ ರಾಜಣ್ಣ, ನಾಗರಾಜು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದತ್, ರಾಘವೇಂದ್ರ, ತಿಮ್ಮಣ್ಣ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.