ADVERTISEMENT

ಶೇಂಗಾಕ್ಕೆ ಶೀಘ್ರ ಬೆಂಬಲ ಬೆಲೆ ಘೋಷಣೆ: ರಘುಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 7:02 IST
Last Updated 25 ನವೆಂಬರ್ 2017, 7:02 IST

ಮೊಳಕಾಲ್ಮುರು: ಶೇಂಗಾಕ್ಕೆ ಶೀಘ್ರ ಬೆಂಬಲ ಬೆಲೆ ಘೋಷಣೆ ಜತೆಗೆ ಖರೀದಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಜಿಲ್ಲೆಯ ಶೇಂಗಾ ಬೆಳೆಗಾರರು ತೀವ್ರ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವ ಜತೆಗೆ ಬೆಳೆಗಾರರ ನೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಇದಕ್ಕೆ ಕೃಷಿ ಸಚಿವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ
ಲಿಖಿತ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಶೇಂಗಾ ಬಿತ್ತನೆ ಪ್ರಮಾಣ, ಇಳುವರಿ ಪ್ರಮಾಣ, ಇಳುವರಿ ಕುಸಿತಕ್ಕೆ ಕಾರಣ, ಬೆಳೆ ಗುಣಮಟ್ಟ, ಪ್ರಸ್ತುತ ಮಾರುಕಟ್ಟೆ ದರ, ಬಿತ್ತನೆ ವೇಳೆ ಖರೀದಿ ಮಾಡಿದ್ದ ದರ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗಿದೆ. ಇದರ ಪ್ರಕಾರ ಗುಣಮಟ್ಟದ ಶೇಂಗಾಕ್ಕೆ ನಿಗದಿ ಮಾಡಿರುವ ₹ 4,450ಕ್ಕೂ ಕಡಿಮೆ ದರವಿದೆ. ಆದ್ದರಿಂದ →ನ.13ರಂದು ‘ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನ ಸ್ಥಿರೀಕರಣ ಬೆಲೆ ಸಂಪುಟ ಉಪ ಸಮಿತಿ’ ಸಭೆಯಲ್ಲಿ ನಿರ್ಧಾರ ಕೈಗೊಂಡು ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಬಹುತೇಕ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಕೊಳ್ಳಲಾಗುವುದು. ಬಳಿಕ ಸಂಪುಟ ಉಪ ಸಮಿತಿ ಶಿಫಾರಸಿನ ದರ ಪ್ರಕಾರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾಗಿ ರಘುಮೂರ್ತಿ ತಿಳಿಸಿದರು.

‘ಪ್ರಜಾವಾಣಿ’ಯಲ್ಲಿ ಈಚೆಗೆ ಶೇಂಗಾಕ್ಕೆ ಬೆಂಬಲ ಬೆಲೆ ಕುರಿತಂತೆ ವಿಶೇಷ ವರದಿ ಪ್ರಕಟವಾಗಿದ್ದು ಸಹ ಸರ್ಕಾರದ ಗಮನ ಸೆಳೆಯಲು ಸಹಕಾರಿಯಾಯಿತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.