ನಾಯಕನಹಟ್ಟಿ: ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಲಾಗುವುದು ಎಂದು ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದರು. ಸಮೀಪದ ಎನ್.ಮಹದೇವಪುರ, ಎನ್.ಗೌರಿಪುರ ಹಾಗೂ ಎನ್. ದೇವರಹಳ್ಳಿ ಗ್ರಾಮದಲ್ಲಿ ಶನಿವಾರ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ
ಅಡಿಯಲ್ಲಿ ಮಂಜೂರಾದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ ಎನ್.ಮಹದೇವಪುರ ಗ್ರಾಮದಿಂದ ತಳಕು ಹೋಬಳಿಯ ಹೊಸಹಳ್ಳಿ ಗ್ರಾಮದ ಮಧ್ಯ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಕಾಮಗಾರಿಗೆ ₹ 9 ಕೋಟಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ಈ ಕಾಮಗಾರಿಯನ್ನು ಎರಡು ಹಂತಗಳಲ್ಲಿ ವಿಗಂಡಿಸಲಾಗಿದ್ದು, ಎನ್.ಮಹದೇವಪುರ ಗ್ರಾಮದಿಂದ ಎನ್.ದೇವರಹಳ್ಳಿ ಗ್ರಾಮದವರೆಗೆ ₹ 4.14 ಕೋಟಿ ವೆಚ್ಚದಲ್ಲಿ 5.2ಕಿ.ಮೀ ಉದ್ದದ ರಸ್ತೆ ಮತ್ತು ಎನ್.ದೇವರಹಳ್ಳಿ ಗ್ರಾಮದಿಂದ ತಳಕು ಹೋಬಳಿಯ ಹೊಸಹಳ್ಳಿ ಗ್ರಾಮದವರೆಗೆ ₹ 3.30 ಕೋಟಿ ವೆಚ್ಚದಲ್ಲಿ 4.4 ಕಿ.ಮೀ ಉದ್ದದ ಡಾಂಬರ್ ರಸ್ತೆ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
ಮೇವು ಬ್ಯಾಂಕ್ ಸ್ಥಾಪನೆ: ಕ್ಷೇತ್ರದ ವ್ಯಾಪ್ತಿಯಲ್ಲಿ ಸಕಾಲಕ್ಕೆ ಮಳೆ ಇಲ್ಲದೇ ರೈತರ ಜಾನುವಾರಿಗೆ ಮೇವಿನ ಅಭಾವ ಉಂಟಾಗಿದೆ. ಹಾಗಾಗಿ ಜಾನುವಾರಿಗೆ ಮೇವು ಒದಗಿಸಲು ಗೋಶಾಲೆಗಳನ್ನು ಮುಂದುವರಿಸಲು ಕಂದಾಯ ಸಚಿವರಿಗೆ ಮನವಿ ಮಾಡಲಾಗಿದೆ. ಹಾಗೆಯೇ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ, ರಾಯಪುರದಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ಜಿ.ಬೋರನಾಯಕ, ಎನ್. ದೇವರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ, ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸೈಯದ್ ಅನ್ವರ್, ಬಿಜೆಪಿ ಮಂಡಲ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ, ಕಾರ್ಯದರ್ಶಿ ಪಿ.ಶಿವಣ್ಣ, ಮುಖಂಡರಾದ ತಿಪ್ಪೇಸ್ವಾಮಿ, ಪಟೇಲ್ ಜಿ.ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಸಿ.ಬಿ.ಮೋಹನ್, ಸದಸ್ಯ ದಿವಾಕರ ರೆಡ್ಡಿ, ತಿಪ್ಪೇರುದ್ರಸ್ವಾಮಿ, .ಮ.ಗುರುಲಿಂಗಯ್ಯ, ಎಂಜಿನಿಯರ್ ನಾಗರಾಜ್, ಗುತ್ತಿಗೆದಾರ ರವಿಕುಮಾರ್, ಇಸ್ಮಾಯಿಲ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.