ಮಂಗಳೂರು: ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಮಂಗಳಮುಖಿಯೊಬ್ಬರು ರೇಡಿಯೊ ನಿರೂಪಕಿಯಾಗುವ ಮೂಲಕ ಹೊಸತೊಂದು ಸಾಧನೆ ಮಾಡಲು ಮುಂದಾಗಿದ್ದಾರೆ. ಮಂಗಳೂರಿನ ರೇಡಿಯೊ ಸಾರಂಗ್ 107.8 ಎಫ್ಎಂ ಇವರಿಗೆ ಅವಕಾಶ ನೀಡಿದ್ದು, ಶುಭ ಮಂಗಳ ಕಾರ್ಯಕ್ರಮದ ಮೂಲಕ ಜನರ ಮನೆ ಮನ ತಲುಪಲಿದ್ದಾರೆ.
ಮಂಡ್ಯದವರಾದ ಕಾಜಲ್ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಒಂಬತ್ತು ವರ್ಷಗಳಿಂದ ವಾಸಿಸುತ್ತಿದ್ದಾರೆ. ಪಿಯುಸಿವರೆಗೆ ಶಿಕ್ಷಣವನ್ನು ಮುಗಿಸಿ, ಇದೀಗ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಹೊಂದಿದ್ದಾರೆ. ನೃತ್ಯ ಬ್ಯೂಟಿಷಿಯನ್, ರಂಗಭೂಮಿ, ಟಿವಿ ವಾಹಿನಿ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
‘ಎಂಜಿಎಂ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ್ ಕಾಮತ್ ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ’ ಎಂದು ಕಾಜಲ್ ಹೇಳುತ್ತಾರೆ. ‘ಮಂಗಳಮುಖಿಯರು ಕೂಡಾ ಎಲ್ಲರಂತೆ ಸ್ವಾಭಿಮಾನದಿಂದ ಜೀವಿಸಲು ಬಯಸುತ್ತಾರೆ. ಅವರಲ್ಲಿ ಕೂಡಾ ಪ್ರತಿಭಾವಂತರಿದ್ದಾರೆ.
ರೇಡಿಯೊ ಸಾರಂಗ್ ಮೂಲಕ ಕಾಜಲ್ ಅವರ ಪ್ರತಿಭೆಯನ್ನು ನಾವು ಗುರುತಿಸುತ್ತಿದ್ದೇವೆ. ಸಮಾಜ ಮಂಗಳಮುಖಿಯರನ್ನು ಮಾನವೀಯ ನೆಲೆಯಲ್ಲಿ ಕಂಡು ಅವರಿಗೆ ಪ್ರೋತ್ಸಾಹಿಸಿದಾಗ ಮಾತ್ರ ಅವರೂ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಜೀವಿಸಲು ಸಾಧ್ಯ’ ಎಂದು ರೆಡಿಯೊ ಸಾರಂಗ್ ಸಹಾಯಕ ನಿರ್ದೇಶಕ ಡಾ. ಮೆಲ್ವಿನ್ ಪಿಂಟೋ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.