ADVERTISEMENT

ಕಳಪೆ ಕಾಮಗಾರಿಗೆ ಹಣ ಪಾವತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 7:22 IST
Last Updated 31 ಅಕ್ಟೋಬರ್ 2014, 7:22 IST

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸಮರ್ಪಕವಾಗದಿದ್ದಲ್ಲಿ, ಅವುಗಳ ಗುಣಮಟ್ಟ ಸರಿಯಿಲ್ಲದಿದ್ದಲ್ಲಿ ಬಿಲ್‌ನ್ನು ಪಾಸ್ ಮಾಡುವುದಿಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ಪುರಸಭಾಭವನದಲ್ಲಿ ಪುರಸಭಾಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಸ್‌ಎಸ್‌ಸಿ ಅನುದಾನದ ಮೂಲಕ ಡಾಂಬರೀಕರಣ ಕಾಮಗಾರಿ ನಿರ್ವಹಿಸು ವವರು  ಉತ್ತಮ ಗುಣಮಟ್ಟದ ಕಾಮಗಾರಿ ನಡೆಸ ದಿದ್ದರೆ ಅಂಥವರ ಟೆಂಡರ್ ಅಮಾನತುಗೊಳಿಸ ಲಾಗುವುದು ಎಂದು ಎಚ್ಚರಿಸಿದರು.

ಕೆಲವೆಡೆ ಮೋರಿಗಳ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯ ಅಶ್ಫಕ್ ಅಹಮದ್ ದೂರಿದರು. ಸಾಲ್ಮರದ ಕಾಬೆಟ್ಟಿನಲ್ಲಿ ಒಳಚರಂಡಿಯ ನೀರು ಹರಿದು ಪರಿಸರದಲ್ಲಿ ರೋಗಭೀತಿಯುಂಟಾಗಿದೆ. ಪುರ ಸಭಾ ಆಡಳಿತ ಈ ಕುರಿತು ಗಮನ ಹರಿಸುತ್ತಿಲ್ಲ ಎಂದಾಗ ಅಧ್ಯಕ್ಷೆ ಪ್ರತಿಕ್ರಿಯಿಸಿ ಅಂತಹ ಕಡೆ ಕಾರ್ಯ ನಿರ್ವಹಿಸುವ ಗುತ್ತಿಗೆದಾರರು ದೊರೆಯುತ್ತಿಲ್ಲ. ಇದೀಗ ಕಾಮಗಾರಿ ನಡೆಸಿ ಸಮಸ್ಯೆ ಪರಿಹರಿಸ ಲಾಗುವುದು ಎಂದರು.

ಪುರಸಭೆಯಿಂದ ೭.೨೫ ನಿಧಿಯಿಂದ ಫಲಾನು ಭವಿಗಳಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತಿದ್ದು, ಗ್ಯಾಸ್ ಸಿಲಿಂಡರ್ ಪೂರೈಕೆ ಸಮರ್ಪಕವಾಗಿಲ್ಲ ಎಂದು ಸದಸ್ಯ ಶುಭದ ರಾವ್ ಆರೋಪಿಸಿದರು. ಸದಸ್ಯ ನವೀನ್ ದೇವಾಡಿಗ ಮಾತನಾಡಿ, ಗ್ಯಾಸ್ ಏಜೆನ್ಸಿಗೆ ಪುರಸಭೆ ವತಿಯಿಂದ ಸಮರ್ಪಕವಾಗಿ ಹಣ ಪಾವತಿ ಯಾಗುತ್ತಿಲ್ಲ ಎನ್ನುತ್ತಿದ್ದಾರೆ ಎಂದರು.

ಮುಖ್ಯಾಧಿಕಾರಿ ರಾಯಪ್ಪ ಇದಕ್ಕೆ ಪ್ರಿತಿಕ್ರಿಯಿಸಿ ಗ್ಯಾಸ್ ಏಜೆನ್ಸಿಗೆ ಪುರಸಭೆ ವತಿಯಿಂದ ಹಣ ಪಾವತಿ ಬಾಕಿ ಇಲ್ಲ ಎಂದರು. ಹಾಗಾದರೆ ಮುಂದೆ ಸರಿಯಾಗಿ ಗ್ಯಾಸ್ ಪೂರೈಸದ ಸಂಸ್ಥೆಗೆ ಟೆಂಡರ್‌ಗೆ ಅವಕಾಶ ನೀಡಕೂಡದು ಎಂದು ಶುಭದ ರಾವ್ ತಿಳಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕವನ್ನು ಅಳವಡಿಸಿದವರಿಂದ ಶುಲ್ಕ ರೂಪದಲ್ಲಿ ಈ ಹಿಂದೆ ₨ ೩೬ ಸಾವಿರ ಆದಾಯ  ಬರುತ್ತಿತ್ತು. ಇದೀಗ ಅದು ₨೩.೫೦ಲಕ್ಷ ಹೆಚ್ಚುವರಿ ಆದಾಯ ಬರುವಂತಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.

ನಗರದಲ್ಲಿ ಹೊಸ ಕಟ್ಟಡ ನಿರ್ಮಾಣ ಸಂದರ್ಭ ಪುರಸಭೆಯ ನೀರನ್ನು ಬಳಸಲಾಗುತ್ತಿದೆ. ಇಂತಹ ಅಕ್ರಮ ಸಂಪರ್ಕದ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸುಭಿತ್ ಕುಮಾರ್ ಆಗ್ರಹಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಸಾಕಾಷ್ಟು ಶೌಚಾಲಯದ ಬೇಡಿಕೆಗಳಿದ್ದರೂ, ಆ ಬೇಡಿಕೆಯನ್ನು ಪೂರೈಸಲಾಗು ತ್ತಿಲ್ಲ. ಉಡುಪಿ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿ, ಶೌಚಾಲಯ ನಿರ್ಮಾಣಕ್ಕೆ ಪ್ರತ್ಯೇಕ ಅನು ದಾನವನ್ನು ಒದಗಿಸಿಕೊಡಬೇಕು ಎಂದು ಸದಸ್ಯೆ ನಳಿನಿ ಆಚಾರ್ಯ ಆಗ್ರಹಿಸಿದರು.

ಸದಸ್ಯ ಮೊಹಮದ್ ಶರೀಫ್, ಟಿ.ಗಿರಿಧರ ನಾಯಕ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿ ಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ವಿನ್ನಿಬೋಲ್ಡ್ ಮಂಡೋನ್ಸಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.