ADVERTISEMENT

ಜೀವನದಲ್ಲಿ ಶಿಕ್ಷಣ ಮಹತ್ವದ್ದು: ಅರ್ಜುನ್

ಮಂಗಳೂರು ವಿವಿಯಲ್ಲಿ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:19 IST
Last Updated 19 ಏಪ್ರಿಲ್ 2017, 6:19 IST
ಜೀವನದಲ್ಲಿ ಶಿಕ್ಷಣ ಮಹತ್ವದ್ದು: ಅರ್ಜುನ್
ಜೀವನದಲ್ಲಿ ಶಿಕ್ಷಣ ಮಹತ್ವದ್ದು: ಅರ್ಜುನ್   
ಮುಡಿಪು: ‘ನಮ್ಮ ಜೀವನದಲ್ಲಿ ಶಿಕ್ಷಣ ಬಹಳ ಮಹತ್ವಪೂರ್ಣವಾದುದು. ಇದರಿಂದ ಸರಿತಪ್ಪುಗಳನ್ನು ಅರಿತುಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ತಂದೆಯ ಇಚ್ಛೆಯಂತೆ ಶಿಕ್ಷಣಕ್ಕೆ ಒತ್ತುಕೊಟ್ಟು, ಕಠಿಣ ಪರಿಶ್ರಮದೊಂದಿಗೆ ಸಿನಿಮಾ ರಂಗದಲ್ಲೂ ಕೆಲಸ ಮಾಡುತ್ತಿದ್ದೇನೆ’ ಎಂದು ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಹೇಳಿದರು. 
 
ಅವರು  ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ  ಸ್ನಾತಕೋತ್ತರ  ವಿದ್ಯಾರ್ಥಿ ಪರಿಷತ್  ಆಶ್ರಯದಲ್ಲಿ ವಿವಿ ಕ್ಯಾಂಪಸ್ಸಿನ ಮಂಗಳ ಸಭಾಂಗಣದಲ್ಲಿ ಮೂರು ದಿನ ನಡೆಯಲಿರುವ ಅಂತರ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸಂಭ್ರಮ-2017’ ಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. 
 
‘ಚಿತ್ರ ನಟನೆಯಲ್ಲಿ ತಂದೆ ಬೆನ್ನೆಲುಬಾಗಿದ್ದರೂ,  ಕಠಿಣ ಶ್ರಮವಹಿಸಿ,  ನಟನೆಗೆ ಸಂಬಂಧಿಸಿದ ಕೌಶಲ ಅರಿಯಲು  ಹಗಲಿರುಳು ಶ್ರಮಿಸಿ, ಪರೀಕ್ಷೆ ಮುಗಿಸಿಯೇ ಚಿತ್ರರಂಗವನ್ನು ಪ್ರವೇಶಿಸಿದ್ದೇನೆ. ತಂದೆಯ ಆಶೀರ್ವಾದದಂತೆ ಕಠಿಣ ಶ್ರಮವಹಿಸಿ ತುಳುಚಿತ್ರರಂಗಕ್ಕೆ ಪ್ರವೇಶಿಸಿದ್ದು, ಮುಂದಿನ ಚಿತ್ರಗಳಲ್ಲಿಯೂ ಜನಮೆಚ್ಚುಗೆಯ ನಟನೆಯನ್ನು ನೀಡುವ ಮುಖೇನ ಎಲ್ಲರಿಗೂ ಮನರಂಜಿಸಲು ಪ್ರಯತ್ನಿಸುವೆ’ ಎಂದು ಹೇಳಿದರು.
 
ಮಂಗಳೂರು ವಿಶ್ವವಿದ್ಯಾಲಯದ  ಕುಲಪತಿ  ಪ್ರೊ.ಕೆ ಬೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಿನಿಮಾ ಮನರಂಜಕವಾಗಿ ಕಂಡರೂ ಅದರ ಹಿಂದೆ ಕಲಾವಿದರ ಶ್ರಮ, ತ್ಯಾಗ ಬಹಳಷ್ಟಿರುತ್ತದೆ. ಕುಟುಂಬದವರನ್ನು ಬಿಟ್ಟು ರಾತ್ರಿ ಹಗಲು ನಟನೆಯಲ್ಲಿರುತ್ತಾರೆ.
 
ಕನ್ನಡ ಚಿತ್ರರಂಗದ ಪುನೀತ್ ರಾಜ್ ಕುಮಾರ್ ಅವರಲ್ಲಿ ಈ ಬದ್ಧತೆ ಕಂಡಿ ದ್ದೇನೆ. ಅಲ್ಲದೆ  ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ಸಿನಲ್ಲಿ  ರಾಜ್ ಕುಮಾರ್  ಶೂಟಿಂಗ್ ಸಮಯದಲ್ಲಿ  ವಿಶ್ರಾಂತಿಗೆಂದು  ಸ್ಥಳದಲ್ಲಿದ್ದ ಬೆಂಚನ್ನೇ ಆಶ್ರಯಿಸಿ ಮಲಗಿರುವುದು ಕಣ್ಣಾರೆ ಕಂಡಿದ್ದೆ.

ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮುಖೇನ  ಜೀವನದಲ್ಲಿ ಯಶಸ್ವಿಯಾಗಬೇಕು’ ಎಂದರು. 
 
ಅರ್ಜುನ್ ಕಾಪಿಕಾಡ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.  ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ . ಲೋಕೇಶ್,   ಅಧ್ಯಕ್ಷ ದಿವಾಕರ್ ಶೆಟ್ಟಿ,  ಉಪಾಧ್ಯಕ್ಷ ಶ್ಯಾಮ ಪ್ರಸಾದ್,  ಪದಾಧಿಕಾರಿಗಳಾದ ಸುನೀಲ್ ಕೆ.ಎಂ,  ವೀರೇಂದ್ರ ಮೊಗ ವೀರ, ಸುಕ್ಷಿತಾ ರಾವ್.ಬಿ, ಅಶೋಕ್. ಆರ್ ಉಪಸ್ಥಿತರಿದ್ದರು.
 
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಅವರು ಸ್ವಾಗತಿಸಿದರು. ಮಂಗಳೂರು ವಿವಿ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ  ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ   ಶ್ಯಾಂ ಪ್ರಸಾದ್ ವಂದಿಸಿದರು.  
****
ತಮಿಳು –ಮಲಯಾಳಿ ಸಿನಿಮಾಗಳ ವೀಕ್ಷಣೆಗೆ ಆ ಭಾಷಿಗರು ಎಷ್ಟು ಬೆಲೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೋ ಅದೇ ರೀತಿ ತುಳುವರು ಕೂಡಾ ತುಳು ಸಿನಿಮಾವನ್ನು ಪ್ರೋತ್ಸಾಹಿಸಿ ಬೆಳೆಸಬೇಕು
ಅರ್ಜುನ್‌ ಕಾಪಿಕಾಡ್‌, ನಟ
****
ಮನರಂಜನೆ ನೀಡುವ ಸಿನಿಮಾಕ್ಕೆ ತೆರೆಯ ಹಿಂದೆ ಕಲಾವಿದರು, ಪ್ರತಿಭಾವಂತರು ಶ್ರಮ ಪಡುತ್ತಾರೆ. ತ್ಯಾಗ ಮಾಡುತ್ತಾರೆ.
ಪ್ರೊ. ಕೆ. ಭೈರಪ್ಪ, ಮಂಗಳೂರು ವಿವಿ ಕುಲಪತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.