ADVERTISEMENT

‘ತೆರಿಗೆ ಭಾರ ಹೆಚ್ಚಿಸಿದ್ದೇ ಹರಿನಾಥರ ಸಾಧನೆ’

ಮೇಯರ್ ಯೋಜನೆ ಮುಂಗೇರಿಲಾಲನ ಕನಸು: ರೂಪಾ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:29 IST
Last Updated 8 ಮಾರ್ಚ್ 2017, 10:29 IST

ಮಂಗಳೂರು: ಭಾರಿ ನಿರೀಕ್ಷೆಯ ಮಧ್ಯೆ ಮೇಯರ್‌ ಹುದ್ದೆ ಅಲಂಕರಿಸಿದ್ದ ಹರಿ ನಾಥರು, ತಮ್ಮ ಒಂದು ವರ್ಷದ ಅವಧಿ ಯಲ್ಲಿ ತೆರಿಗೆಯ ಭಾರ ಹೆಚ್ಚಿಸಿದ್ದನ್ನು ಬಿಟ್ಟರೆ, ಬೇರಾವುದೇ ಸಾಧನೆ ಮಾಡಿಲ್ಲ ಎಂದು ಪಾಲಿಕೆ ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂಗೇರಾ ಹೇಳಿದರು.

ನಗರದ ಪಾಲಿಕೆಯ ತಮ್ಮ ಕಚೇರಿ ಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಏರಿಸುವುದಿಲ್ಲ ಎಂದು ಜನರಿಗೆ ಪ್ರಮಾಣ ಮಾಡಿ ಅಧಿಕಾರ ಪಡೆದ ವರು, ಇದೀಗ ಆಸ್ತಿ ತೆರಿಗೆ ಹೆಚ್ಚಿಸುವ ಮೂಲಕ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.

ಆಸ್ತಿ ತೆರಿಗೆ ಹೆಚ್ಚಳ, ನೀರಿನ ದರ ಏರಿಕೆ ಮಾಡುವುದರ ಜತೆಗೆ, ಉದ್ಯಮ ಪರವಾನಗಿಯೊಂದಿಗೆ ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು ಅವೈಜ್ಞಾನಿಕ ವಾಗಿ ವಿಧಿಸಲಾಗಿದೆ. ಇದರಿಂದ ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಬರೆ ಎಳೆದಂತಾ ಗಿದೆ ಎಂದು ದೂರಿದರು.

ಅಧಿಕಾರ ವಹಿಸಿಕೊಂಡ ಆರಂಭ ದಲ್ಲಿ ಎದುರಾದ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಮೇಯರ್‌ ಎಡವಿದರು. ಅಧಿಕಾರಿಗಳ ಮಾತು ಕೇಳಿ ಜನರಿಗೆ ಸುಳ್ಳು ಮಾಹಿತಿ ನೀಡಿದರು. ಇದರಿಂ ದಾಗಿ ಕಳೆದ ಬೇಸಿಗೆಯಲ್ಲಿ ನಗರದ ಜನತೆ ನೀರಿಗಾಗಿ ಪರದಾಡುವಂತಾಯಿತು.

ಮೇಯರ್‌ ವೈಫಲ್ಯದಿಂದಾಗಿ ಬೇರೆ ಊರಿನಿಂದ ವ್ಯಾಸಂಗಕ್ಕೆ ಬಂದಿದ್ದ ವಿದ್ಯಾರ್ಥಿಗಳು ನಗರವನ್ನು ಬಿಡುವಂತಾ ಯಿತು. ಹೋಟೆಲ್‌ ವ್ಯಾಪಾರ ಸ್ಥಗಿತ ಗೊಂಡಿತು. ಶಾಲಾ–ಕಾಲೇಜುಗಳಿಗೆ ಒತ್ತಾಯದ ರಜೆ ಕೊಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಇವರ ಸಾಧನೆ ಎಂದು ಟೀಕಿಸಿದರು.

ಪ್ಲಾಸ್ಟಿಕ್‌ ಮುಕ್ತ ನಗರ ಮಾಡುವ ಘೋಷಣೆ ಮಾಡಿದವರು, ಕೇವಲ ಬಟ್ಟೆ ಚೀಲ ವಿತರಣೆಗೆ ಅದನ್ನು ಸೀಮಿತಗೊ ಳಿಸಿದರು. ಕೆಲ ಸಣ್ಣಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡಿದ್ದು ಬಿಟ್ಟರೆ, ಈ ವಿಷಯದಲ್ಲಿ ಬೇರಾವುದೇ ಸಾಧನೆ ಆಗಲಿಲ್ಲ. ಇದೇ ರೀತಿಯ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆಯೂ ಹೇಳಿಕೆಗೆ ಸೀಮಿತವಾಗಿ ಉಳಿಯಿತು. ಹೈಟೆಕ್‌ ಶೌಚಾಲಯ, ಹೈಟೆಕ್‌ ಮಾರುಕಟ್ಟೆ, ಹೈಟೆಕ್‌ ಬಸ್‌ ನಿಲ್ದಾಣ ಸೇರಿದಂತೆ ಕೇವಲ ಘೋಷಣೆಗಳ ಪಟ್ಟಿಯನ್ನು ಮುಂದಿಟ್ಟರೆ ಹೊರತು ಅವುಗಳನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ಆರೋಪಿಸಿದರು.

ಸರ್ಕಾರದ ಯೋಜನೆಗಳ ಅನುದಾ ನವನ್ನೂ ಸಮರ್ಪಕವಾಗಿ ಬಳಕೆ ಮಾಡಿ ಕೊಳ್ಳಲು ಸಾಧ್ಯವಾಗಿಲ್ಲ. ನಗರೋತ್ಥಾನ ಯೋಜನೆ 3 ನೇ ಹಂತದಡಿ ಪಾಲಿಕೆ ₹39 ಕೋಟಿ ಬಂದಿದೆ. ಅದನ್ನು ಬಳಕೆ ಮಾಡಿಲ್ಲ. ಹೀಗಾಗಿ 4 ನೇ ಹಂತದ ಅನುದಾನ ಬರುವ ಸಾಧ್ಯತೆ ಕಡಿಮೆ ಎಂದು ಅವರದ್ದೇ ಪಕ್ಷದ ಶಾಸಕ ಜೆ. ಆರ್‌. ಲೋಬೊ ಸ್ಪಷ್ಟಪಡಿಸಿದ್ದಾರೆ. ಇದು ಮೇಯರ್‌ ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಲೇವಡಿ ಮಾಡಿದರು.

ಹಿಂದಿನ ಬಿಜೆಪಿ ಅವಧಿಯಲ್ಲಿ ಅಭಿ ವೃದ್ಧಿಪಡಿಸಿದ ರಸ್ತೆಗಳಿಗೆ ಫುಟ್‌ಪಾತ್‌, ಚರಂಡಿಗಳ ನಿರ್ಮಾಣ ಕಾಮಗಾರಿ ಯನ್ನೂ ಪೂರ್ಣಗೊಳಿಸಿಲ್ಲ ಎಂದು ದೂರಿದರು. ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ರಾಜೇಂದ್ರ ಕುಮಾರ, ಗಣೇಶ್‌ ಹೊಸಬೆಟ್ಟು ಇದ್ದರು.

ಬಂಟ್ವಾಳ ಉಸ್ತುವಾರಿ ಸಚಿವರು
ಬಿ. ರಮಾನಾಥ ರೈ ಅವರು ಕೇವಲ ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಂಬುದನ್ನೇ ಮರೆತಂತಿದೆ ಎಂದು ರೂಪಾ ಡಿ. ಬಂಗೇರಾ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು, ಪಾಲಿಕೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರ ದಲ್ಲಿ ಸಚಿವರಾಗಿರುವ ರಮಾನಾಥ ರೈ, ಇದುವರೆಗೆ ಪಾಲಿಕೆಯಲ್ಲಿ ಒಂದೇ ಒಂದು ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ. ಇವರಿಗೆ ನಗರದ ಅಭಿವೃದ್ಧಿಯ ಬಗ್ಗೆ ಕಾಳಜಿ ಎಷ್ಟಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.

*
ಮುಂಗೇರಿಲಾಲ್‌ನಂತೆ ಕನಸಿನಲ್ಲಿ ಕಂಡದ್ದನ್ನೆಲ್ಲ ಯೋಜನೆಯಾಗಿ ಘೋಷಣೆ ಮಾಡಿದ ಮೇಯರ್‌, ಅವುಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ವಿಫಲರಾಗಿದ್ದಾರೆ.
-ರೂಪಾ ಡಿ. ಬಂಗೇರಾ,
ಪಾಲಿಕೆ ಪ್ರತಿಪಕ್ಷದ ನಾಯಕಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.