ಕರ್ಜೆ(ಬ್ರಹ್ಮಾವರ): ಒಂದು ದಿವ್ಯ ದೃಷ್ಟಿಯಿಂದ ಮಾತ್ರ ಭವ್ಯ ಸೃಷ್ಟಿ ಸಾಧ್ಯ ಎಂದು ಒಡಿಯೂರು ಗುರುದೇವ ದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯಿ ಹೇಳಿದರು.
ಬ್ರಹ್ಮಾವರ ಬಳಿಯ ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಪ್ರಥಮ ಧರ್ಮಸಭೆ ಮಾತೃ ಸಂಗಮ-ಮಹಿಳಾ ಸಮಾವೇಶವನ್ನು ತುಳಸಿ ಗಿಡಕ್ಕೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕುಟುಂಬದ ಅಭ್ಯುದಯಕ್ಕೆ ಮಹಿಳೆಯೇ ಆಧಾರ. ಮುಂದಿನ ಪೀಳಿಗೆಗೆ ಹೊಣೆಗಾರಿಕೆ ಮತ್ತು ಕರ್ತವ್ಯದ ಪ್ರಜ್ಞೆಯನ್ನು ದಾಟಿಸುವ ಜವಾಬ್ದಾರಿ ಸ್ತ್ರೀಯರ ಮೇಲಿದೆ. ಶಿವ ಜಗತ್ತಿನ ಪ್ರತೀಕ. ಅಂತಹ ಚೈತನ್ಯ ಶಕ್ತಿಯನ್ನು ನೋಡಬೇಕಿದ್ದರೆ ಅದು ದೇವಾಲಯದಲ್ಲಿ ಮಾತ್ರ ಸಾಧ್ಯ ಎಂದರು.
ಉಪನ್ಯಾಸಕಿ ಅಕ್ಷಯ ಗೋಖಲೆ ಕಾರ್ಕಳ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯೆ ಗೋಪಿ ಕೆ.ನಾಯ್ಕ, ಕರ್ಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಗ್ರಾಮ ಯೋಜನೆ ಜ್ಞಾನವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಜ್ಯೋತಿ, ಆಶಾ ಸುಧಾಕರ ಶೆಟ್ಟಿ ಇದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮತ್ತು ಆಶಾ ಸುಧಾಕರ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಜಯಂತಿ ರಮೇಶ್ ಸ್ವಾಗತಿಸಿದರು. ಅಮಿತಾ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.