ADVERTISEMENT

ಪೊಳಲಿ: ಮಣ್ಣಿನ ಮೂರ್ತಿಗಳಿಗೆ ಕಲ್ಲಿನ ಆಲಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 5:21 IST
Last Updated 15 ನವೆಂಬರ್ 2017, 5:21 IST

ಬಜ್ಪೆ: ಪೊಳಲಿ ರಾಜರಾಜೇಶ್ವರಿ ಹಾಗೂ ಪರಿವಾರ ದೇವರ ಮಣ್ಣಿನ ಮೂರ್ತಿಗಳಿಗೆ ಶಿಲಾಮಯ ಆಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗರ್ಭಗುಡಿಯ ಒಳನಡೆಯ ಕಂಬ ಹಾಗೂ ನವಿಲಿನ ಕುಸುರಿ ಕೆಲಸದಲ್ಲಿ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ್ ಅವರ ನೇತೃತ್ವದಲ್ಲಿ ಶಿಲ್ಪಿಗಳು ನಿರತಾಗಿದ್ದಾರೆ.

ಸುತ್ತುಪೌಳಿ ಮತ್ತು ಗರ್ಭಗುಡಿಯ ದೀಪದಳಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಹೂವು, ಸಿಂಹ, ಆನೆ, ನವಿಲು ಮೈದಳೆಯುತ್ತಿವೆ. ಈಗಾಗಲೇ ನಿರ್ಮಾಣಗೊಂಡಿರುವ ದುರ್ಗಾದೇವಿಯ ಗರ್ಭಗುಡಿಯ ಸುತ್ತಲೂ ಸುಂದರ ಕೆತ್ತನೆಗಳನ್ನು ಕೆತ್ತಲಾಗುತ್ತಿದ್ದು, ಛಾವಣಿಯನ್ನು ತಾಮ್ರದ ಹೊದಿಕೆಯಿಂದ ಮುಚ್ಚಲಾಗಿದೆ.

ದೇಗುಲದ ಒಂದು ಬದಿಯಲ್ಲಿ ಮರದ ಕೆತ್ತನೆ, ಕಲ್ಲಿನ ಕುಸುರಿ ಕೆಲಸಗಳು ನಡೆಯುತ್ತಿವೆ. ಮುಂದಿನ ಜಾತ್ರೆ ಆರಂಭಗೊಳ್ಳುವ ಮುಂಚೆ ದೇಗುಲದ ಸಂಪೂರ್ಣ ಕಾಮಗಾರಿ ನಡೆಯಬೇಕೆಂದು ಭಕ್ತರ ಆಗ್ರಹವಾಗಿದೆ.

ADVERTISEMENT

ಬಿಲ್ಲವ, ಕುಲಾಲರ ಕೊಡುಗೆ: ಪೊಳಲಿ ದೇಗುಲಕ್ಕೆ ಕೆಲವು ಕೊಡುಗೆಗಳನ್ನು ನೀಡಲು ಪೊಳಲಿ ಸಾವಿರ ಸೀಮೆಯ ಬಿಲ್ಲವರು ಹಾಗೂ ಕುಲಾಲರು ತೀರ್ಮಾನಿಸಿದ್ದಾರೆ. ಬಿಲ್ಲವ ಸಮಾಜದ ವತಿಯಿಂದ ನೂತನ ಧ್ವಜಸ್ತಂಭ ನಿರ್ಮಿಸಲಿದ್ದಾರೆ.  ಇದೇ 19ರಂದು ಬಿ.ಸಿ.ರೋಡ್‍ನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಪೊಳಲಿಗೆ ಧ್ವಜಸ್ಥಂಭದ ಮರವನ್ನು ಮೆರವಣಿಗೆಯಲ್ಲಿ ತರಲಿದ್ದಾರೆ.

ಕುಲಾಲ ಸಮಾಜದ ವತಿಯಿಂದ ₹16 ಲಕ್ಷ ಮೌಲ್ಯದಲ್ಲಿ ಶ್ರೀ ಮಹಾಗಣಪತಿ ಹಾಗೂ ಭದ್ರಕಾಳಿ ದೇವರ ಗರ್ಭಗುಡಿಯ ಹೊಸ್ತಿಲು ಮತ್ತು ಬಾಗಿಲಿಗೆ ಬೆಳ್ಳಿ ಹೊದಿಕೆಯನ್ನು  ಸಮರ್ಪಿಸಲು ತೀರ್ಮಾನಿಸಿದ್ದಾರೆ.  ದೇಣಿಗೆ ಸಂಗ್ರಹದ ಮೂಲಕ ವೆಚ್ಚಭರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.