ADVERTISEMENT

ಶಕುಂತಳಾ ಶೆಟ್ಟಿಗೆ ಅವಹೇಳನ ಮಾಡಿಲ್ಲ : ಆಲಿ

ವ್ಯಾಟ್ಸ್ ಆ್ಯಪ್‌ ಪ್ರಕರಣ; ಕಾಂಗ್ರೆಸ್ ಸದಸ್ಯ ಎಚ್. ಮಹಮ್ಮದ್ ಅಲಿ ವಿವರಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 9:57 IST
Last Updated 27 ಮೇ 2018, 9:57 IST

ಪುತ್ತೂರು : ‘ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ವಿರುದ್ದ ವಾಟ್ಸ್ ಆ್ಯಪ್‌ನಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸುವಂಥ ಸಣ್ಣ ವ್ಯಕ್ತಿ ನಾನಲ್ಲ. ಸುದ್ದಿಗೋಷ್ಠಿ ನಡೆಸಿ ನನ್ನ ವಿರುದ್ದ ಆರೋಪ ಮಾಡಿದ ವ್ಯಕ್ತಿಗಳ ಹಿನ್ನಲೆ ಏನೆಂಬುವುದು ಪುತ್ತೂರಿನ ಜನತೆಗೆ ಗೊತ್ತಿದೆ’ ಎಂದು ನಗರಸಭೆಯ ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯ ಎಚ್.ಮಹಮ್ಮದ್ ಆಲಿ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿದ್ದಾರೆ.

‘ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾದರೂ, ಪಕ್ಷದೊಳಗಿನ ಆಂತರಿಕ ಜಗಳ ನಿಂತಿಲ್ಲ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರು ಇನ್ನು ಪಕ್ಷ ಕಟ್ಟುವ ಬದಲು ಮನೆಯಲ್ಲಿ ಬೀಡಿ ಕಟ್ಟುವುದು ಒಳಿತು ಎಂದು ಪುತ್ತೂರು ನಗರಸಭಾ ಕಾಂಗ್ರೆಸ್ ಸದಸ್ಯ ಎಚ್. ಮಹಮ್ಮದ್ ಆಲಿ ಅವರು ರವಾನಿಸಿರುವ ವಾಟ್ಸ್ಆ್ಯಪ್ ಸಂದೇಶವನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಯೋಜಕ ಇಸಾಖ್ ಸಾಲ್ಮರ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮುಂದಿನ ನಗರಸಭಾ ಚುನಾವಣೆಯ ಬಳಿಕ ಬೀಡಿ ಕಟ್ಟುವವರು ಯಾರು ಎಂಬುವುದು ಮಹಮ್ಮದ್ ಆಲಿ ಅವರಿಗೆ ಗೊತ್ತಾಗಲಿದೆ’ ಎಂದಿದ್ದರು.

ಇದಕ್ಕೆ ಶನಿವಾರ ಪ್ರತಿಕ್ರಿಯೆ ನೀಡಿರುವ ಮಹಮ್ಮದ್ ಆಲಿ, ‘ಕಳೆದ 5 ವರ್ಷದ ಅವಧಿಯಲ್ಲಿ ಪುತ್ತೂರಿನಲ್ಲಿ ಯಾರೆಲ್ಲಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಇಲ್ಲಿನ ಜನತೆಗೆ ತಿಳಿದಿದೆ. ಈಗಲೂ ಕೆಲವು ವ್ಯಕ್ತಿಗಳು ನಡೆಸುತ್ತಿರುವ ಪಕ್ಷ ವಿರೋಧಿ ಚಟುವಟಿಕೆಯ ಬಗ್ಗೆ ಮತ್ತು ಪಕ್ಷಕ್ಕೆ ಸೋಲಾಗಲು ಕಾರಣವೇನು ಎಂಬುವುದರ ಬಗ್ಗೆ ಸವಿವರವಾದ ವರದಿಯನ್ನು ದಾಖಲೆ ಸಹಿತವಾಗಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗುವುದು’ ಎಂದಿದ್ದಾರೆ.

ADVERTISEMENT

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವರ ವಿರುದ್ದವಾಗಿ ನನ್ನ ಮೊಬೈಲ್‌ಗೆ ಬಂದಿದ್ದ ವಾಟ್ಸ್ಆ್ಯಪ್ ಸಂದೇಶವು ನನ್ನ ಪುತ್ರಿ ಮೊಬೈಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಕೈತಪ್ಪಿ ಬೇರೆ ನಂಬರಿಗೆ ಹೋಗಿರುತ್ತದೆಯೇ ಹೊರತು ಉದ್ದೇಶಪೂರ್ವಕವಾಗಿ ಈ ಸಂದೇಶವನ್ನು ನಾನು ಕಳುಹಿಸಿರುವುದಿಲ್ಲ. ಇಂತಹ ಸಂದೇಶಗಳನ್ನು ಕಳುಹಿಸುವ ಸಣ್ಣ ವ್ಯಕ್ತಿ ನಾನಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಸುದ್ದಿಗೋಷ್ಠಿ ನಡೆಸಿ ಅದಕ್ಕೆ ಹೆಚ್ಚಿನ ಪ್ರಚಾರ ಕೊಟ್ಟು ಇಸಾಖ್ ಸಾಲ್ಮರ ಅವರೇ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರನ್ನು ಅವಮಾನಿಸುವ ಕೆಲಸವನ್ನು ಮಾಡಿದ್ದಾರೆ’ ಎಂದು ಮಹಮ್ಮದ್ ಆಲಿ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.