ADVERTISEMENT

ಸಾವಯವ ತರಕಾರಿ ಬೆಳೆಸಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2013, 10:50 IST
Last Updated 29 ಜೂನ್ 2013, 10:50 IST

ವಿಟ್ಲ: ಎಂಡೊ ದುರಂತ ನಮ್ಮ ಕಣ್ಣೆದುರಿಗಿದ್ದು, ನಾವು ಸಾವಯವ ತರಕಾರಿಗೆ ಮೊರೆ ಹೋಗಬೇಕೆಂಬುದನ್ನು ತೋರಿಸಿಕೊಟ್ಟಿದೆ. ಮನೆ ಬಳಕೆಯ ತರಕಾರಿಗಳನ್ನು ನಾವೇ ಬೆಳೆಸಿದರೆ ಅದು ವಿಷಯುಕ್ತವಾಗಿರದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಮೇಶ ಎಂ. ಬಾಯಾರು ಹೇಳಿದರು.

ಶಾಲೆಯಲ್ಲಿ ಬುಧವಾರ ಆಯೋಜಿಸಿದ ಸಾವಯವ ಆಹಾರ ಸರಣಿಯ ಮೊದಲ ಕಾರ್ಯಕ್ರಮವನ್ನು  ಉದ್ಘಾಟಿಸಿ ಅಧ್ಯಕ್ಷ ಭಾಷಣ ಮಾಡಿದರು. ಎಲ್ಲ ವಿದ್ಯಾರ್ಥಿಗಳೂ ತಮ್ಮ ಹೆಸರಿನಲ್ಲಿ ಹತ್ತಾರು ಗಿಡಗಳನ್ನು ನೆಟ್ಟು ಬೆಳೆಸಬೇಕು.

ವಿದ್ಯಾರ್ಥಿಗಳು ಆಹಾರ ವಸ್ತುಗಳನ್ನು ಬೆಳೆಸಿ ಸ್ವಾವಲಂಬಿ ಬದುಕಿಗೆ ಎಳವೆಯಿಂದಲೇ ಬುನಾದಿ ಹಾಕಿಕೊಳ್ಳಬೇಕು. ಪ್ರತಿ ಮನೆಯೂ ಸ್ವಾವಲಂಬಿಗಳಾಗುವುದರ ಜತೆಗೆ ಮಕ್ಕಳಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ಕೃಷಿಗೆ ಉತ್ತೇಜಿಸಬೇಕು ಎಂದರು.

ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ವರೆಗೆ ಆರು ಸಾವಯವ ಆಹಾರ ಸರಣಿ ಕಾರ್ಯಕ್ರಮಗಳು ಜರಗಲಿವೆ.  ಏಳನೇ ಕಾರ್ಯಕ್ರಮದಲ್ಲಿ ಸಾವಯವ ಆಹಾರ ಮೇಳ ಎಂಬ ವಿಶೇಷ ತರಕಾರಿ ಮೇಳವನ್ನು ಸಂಘಟಿಸಲಾಗುತ್ತದೆ. ಗ್ರಾಮಸ್ಥರು ಸಂಪೂರ್ಣ ರೀತಿಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಶಾಲಾ ಇಕೋ ಕ್ಲಬ್ ನೋಡೆಲ್ ಲಕ್ಷ್ಮಣ ಟಿ. ನಾಯಕ್ ಪರಿಸರ ಸಾವಯವದ ತರಕಾರಿ ಬಳಕೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕ ಲಿಂಗಪ್ಪ ನಾಯ್ಕ ಸ್ವಾಗತಿಸಿದರು. ಗಣಿತ ಶಿಕ್ಷಕ ಕೆ.ಜಿ. ಸುಬ್ರಹ್ಮಣ್ಯ ಭಟ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT