ಮುಡಿಪು: ಕಯ್ಯಾರ ಕಿಂಞಣ್ಣ ರೈ ಅವರ ಕಾವ್ಯ, ಸಾಹಿತ್ಯ, ಅಧ್ಯಾಪನ ವೃತ್ತಿ ಹೀಗೆ ಯಾವುದೇ ಕ್ಷೇತ್ರವನ್ನು ನೋಡಿದರೂ ಅವರು ನಮಗೆ ಸಮಾ-ಜಮುಖಿಯಾಗಿ ಕಾಣುತ್ತಾರೆ.
ಅದೇ ರೀತಿ ಸರಸ್ವತಿ ಬಾಯಿ ರಾಜವಾಡೆ ಅವರ ಸಾಹಿತ್ಯದಲ್ಲೂ ನಾವು ಗಮನಿಸಬಹುದು. ಆಯಾ ಕಾಲಕ್ಕನುಗುಣವಾಗಿ ಈ ಇಬ್ಬರು ಮಹಾ ಚೇತನಗಳ ಬದುಕು, ಸಾಹಿತ್ಯ, ಹೋರಾಟಗಳು, ಅವರು ಪ್ರಸ್ತುತ ಪಡಿಸುವ ಮನೋಭಾವನೆ ಅವರ ಬರವಣಿಗೆಯಲ್ಲಿ ಬಿಂಬಿತವಾಗುತ್ತದೆ ಎಂದು ಖ್ಯಾತ ಚಿಂತಕ, ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ‘ಶತಮಾನ ಕಂಡ ಸಾಹಿತಿಗಳು’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತ್ರಿಕಾಲ ಪ್ರಜ್ಞೆ ಇದ್ದು ಕಟ್ಟುವ ಕಲಾಕೃತಿ ಅದು ಪರಿಪೂರ್ಣವಾಗಿರುತ್ತದೆ.
ಶತಮಾನ ಕಂಡ ಕವಿಗಳಾದ ಕಯ್ಯಾರ ಹಾಗೂ ರಾಜವಾಡೆ ಇವರಿಬ್ಬರ ಸಾಹಿತ್ಯದಲ್ಲೂ ಇಂತಹ ತ್ರಿಕಾಲ ಪ್ರಜ್ಞೆಯನ್ನು ಗಮನಿಸಬಹುದು ಎಂದು ಹೇಳಿದರು. ಕರ್ನಾಟಕ ಏಕೀಕರಣದ ವೇಳೆ ಕಯ್ಯಾರರು ಎತ್ತಿದ ಧ್ವನಿ ಇಂದಿಗೂ ನಿಂತಿಲ್ಲ. ಅವರ ಧ್ವನಿ ಅಖಂಡ ಕರ್ನಾಟಕದ ಕುರಿತ ಧ್ವನಿ. ಅವರಿಗೆ ಪಂಪ ಪ್ರಶಸ್ತಿ ಮೊನ್ನೆ ತಾನೇ ಬಂತು. ಆದರೆ ಅವರಿಗಿಂತ ಮುಂಚೆ ಆ ಪ್ರಶಸ್ತಿ ಪಡೆದ ಕಿರಿಯರು ತಾವೇನು ಸಾಧನೆ ಮಾಡಿದ್ದೇವೆ ಎಂಬ ಬಗ್ಗೆ ಒಮ್ಮೆ ಅವಲೋಕನ ಮಾಡಿ ನೋಡಬೇಕು ಎಂದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷರಾದ ಸಬಿಹಾ ಭೂಮಿಗೌಡ ಅವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.