ADVERTISEMENT

‘ಪತ್ರಿಕೆಗಳು ಸಾಮಾಜಿಕ ಜೀವನದ ಕಣ್ಗಾವಲು’

ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 5:11 IST
Last Updated 2 ಜುಲೈ 2016, 5:11 IST

ಮಂಗಳೂರು: ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮ ಅತೀ ಅಗತ್ಯ. ಮಾಧ್ಯಮಗಳು ಸಾಮಾಜಿಕ ಜೀವನದ ಕಣ್ಗಾವಲು ಇದ್ದಂತೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದರು.

ಶುಕ್ರವಾರ ಜಿಲ್ಲಾ ಪತ್ರಕರ್ತರ ಸಂಘ ಮಂಗಳೂರಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮನ್ನು ಗಮನಿಸುವವರಿದ್ದಾಗ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತೇವೆ. ಈ ಗಮನಿಸುವ ಕೆಲಸವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳು ಮಾಡುತ್ತವೆ. ಪ್ರಜಾ ಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರುವುದರಿಂದ ರಕ್ತಸಿಕ್ತ ಕ್ರಾಂತಿಗಳು ನಡೆಯುವುದು ತಪ್ಪುತ್ತದೆ ಎಂದರು.

ಉದಯವಾಣಿ ಬ್ಯೂರೋ ಮುಖ್ಯಸ್ಥ ಮನೋಹರ ಪ್ರಸಾದ್, ಅವಿಭಕ್ತ ಕುಟುಂಬಗಳು ಇಂದು ಮರೆಯಾ ಗುತ್ತಿವೆ. ಕೌಟುಂಬಿಕ ವಿಚಾರಗಳನ್ನು ಕೇಂದ್ರೀಕರಿಸಿದ ವರದಿ, ಲೇಖನಗಳ ಮೂಲಕ ಸಾಮಾಜಿಕ ಜೀವನವನ್ನು ಬದಲಾವಣೆ ಮಾಡುವ ಕೆಲಸ ಮಾಧ್ಯಮಗಳಿಂದಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣ ಮತ್ತು ಸಮಾಜ’ ವಿಷಯದ ಕುರಿತು ಮಾತನಾಡಿದ ರೋಶನಿ ನಿಲಯದ ಪ್ರೊ. ಜೋಸ್‌ಲಿನ್ ಲೋಬೊ, ಏಕಕಾಲದಲ್ಲಿ ಅನೇಕ ಜನರೊಂದಿಗೆ ಸಂಪರ್ಕ ಸಾಧಿಸಬಹುದು ಎನ್ನುವುದು ಸಾಮಾಜಿಕ ಜಾಲತಾಣಗಳ ದೊಡ್ಡ ಅನುಕೂಲತೆ. ಆದರೆ ಇದು ನೇರ ಸಂವಹನದಷ್ಟು ಪರಿಣಾಮಕಾರಿಯಲ್ಲ.

ಸಾಮಾಜಿಕ ಜಾಲತಾಣಗಳ ಕಾರಣ ದಿಂದಾಗಿಯೇ ಇಂದು ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಹಾಗಾಗಿ ಮೊಬೈಲ್ ಮತ್ತು ಅಂತರ್ಜಾಲದ ಬಳಕೆ ಸೀಮಿತವಾಗಿರಬೇಕು ಎಂದು ಹೇಳಿದರು.

ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ ಆಡಳಿತಕ್ಕೆ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳುವುದು ಉಪಯುಕ್ತ. ಶೈಕ್ಷಣಿಕ ಚಟುವಟಿಕೆಗಳಿಗೆ ಅಂತರ್ಜಾಲವನ್ನು ಬಳಸಿಕೊಳ್ಳುವುದು ಒಳ್ಳೆಯ ವಿಚಾರ ಎಂದು ಅವರು ಹೇಳಿದರು.

ಪತ್ರಿಕಾ ದಿನದ ಅಂಗವಾಗಿ ಪತ್ರಿಕಾ ಭವನದಲ್ಲಿ ಮಂಗಳೂರಿನ ಸುದ್ದಿ ಛಾಯಾಗ್ರಾಹಕರಾದ ಗೋವಿಂದರಾಜ ಜವಳಿ, ಅಪುಲ್ ಆಳ್ವ ಇರಾ, ಸತೀಶ್ ಇರಾ, ದಯಾ ಕುಕ್ಕಾಜೆ, ರವಿ ಪೊಸವಣಿಕೆ, ಅನ್ನು  ಮಂಗಳೂರು, ಆರ್‌. ಕೆ ಭಟ್‌, ರೇಶ್ಮಾ ಮಂಗಳೂರು, ಮಂಜುನಾಥ್ ಪೈ ಮತ್ತು ಉಮರ್ ಫಾರೂಕ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಚಿವ ರಮಾನಾಥ ರೈ ಅವರು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಹಾಗೂ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.