ಮಂಗಳೂರು: ಎಸ್ಎಫ್ಐ ನಾಯಕಿ ಮಾಧುರಿ ಬೋಳಾರ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿರುವ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಶನಿವಾರ ಇಲ್ಲಿನ ಪಂಪ್ ವೆಲ್ ಬಳಿ ಶ್ರೀಹರಿ ಅಲಿಯಾಸ್ ಹರೀಶ್ ದೇವಾಡಿಗ ಅಲಿಯಾಸ್ ಕಕ್ಕಿಂಜೆ ಹರೀಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಶ್ರೀಹರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕಕ್ಕಿಂಜೆ ಬಳಿಯ ತೋಟತಾಡಿ ಗ್ರಾಮದ ಬೈಲಂಗಡಿ ಗಾಂದೋಟ್ಯ ಮನೆ ನಿವಾಸಿ.
ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣ ಸಂಬಂಧ ಇನ್ನೂ ಕೆಲ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಾಧುರಿ ಬೋಳಾರ ಹಾಗೂ ಇತರರು ಸಂಘಟನೆಯ ಕೆಲಸದ ನಿಮಿತ್ತ ಹೋಗುವಾಗ ಜೆತೆಯಾಗಿ ತೆಗೆದಿರುವ ಭಾವಚಿತ್ರವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದ, ಕೆಲವರು ಪೇಸ್ಬುಕ್ನಲ್ಲಿ ಈ ಚಿತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಈ ಚಿತ್ರದ ಜತೆಗೆ ಬೆದರಿಕೆ ಸಂದೇಶಗಳನ್ನು ಹಾಕುತ್ತಿರುವ ಬಗ್ಗೆ ಎಸ್ಎಫ್ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ಮಾಧುರಿ ನೀಡಿರುವ ದೂರಿನ ಅನ್ವಯ ಜ.9ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.