ADVERTISEMENT

ರಾಮ–ಅಲ್ಲಾಹುವಿನ ಮಧ್ಯೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 6:52 IST
Last Updated 24 ಜನವರಿ 2018, 6:52 IST
ಶಾಸಕ ಸುನೀಲ್‌ಕುಮಾರ್‌
ಶಾಸಕ ಸುನೀಲ್‌ಕುಮಾರ್‌   

ಮಂಗಳೂರು: ಈ ಬಾರಿ ಬಂಟ್ವಾಳದಲ್ಲಿ ನಡೆಯುತ್ತಿರುವ ಚುನಾವಣೆ ರಮಾನಾಥ ರೈ ಹಾಗೂ ರಾಜೇಶ್‌ ನಾಯಕ್‌ ಮಧ್ಯೆಯಲ್ಲ. ರಾಮ ಮತ್ತು ಅಲ್ಲಾಹುವಿನ ನಡುವಿನ ಚುನಾವಣೆ ನಡೆಯಲಿದೆ ಎಂದು ಕಾರ್ಕಳ ಶಾಸಕ ಸುನೀಲ್‌ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲ್ಲಡ್ಕದಲ್ಲಿ ಸೋಮವಾರ ರಾತ್ರಿ ನಡೆದ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀಲ್‌ಕುಮಾರ್, ಬಂಟ್ವಾಳ ಕ್ಷೇತ್ರದ ಜನರು ಅಲ್ಲಾಹುವನ್ನು ಮತ್ತೆ ಮತ್ತೆ ಗೆಲ್ಲಿಸುತ್ತೀವಾ ಅಥವಾ ಶ್ರೀರಾಮನನ್ನು ಗೆಲ್ಲಿಸುತ್ತೀವಾ ಎನ್ನುವುದನ್ನು ಈಗಲೇ ನಿರ್ಧಾರ ಮಾಡಬೇಕು ಎಂದು ಹೇಳಿದರು.

ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಅವರು, ‘ಅಲ್ಲಾಹುವಿನ ಕೃಪೆಯಿಂದ ಆರು ಬಾರಿ ಶಾಸಕನಾಗಿದ್ದೇನೆ’ ಎನ್ನುವ ಹೇಳಿಕೆ ನೀಡಿದ್ದರು. ಇದೀಗ ರೈ ಅವರಿಗೆ ತಿರುಗೇಟು ನೀಡುವ ಭರದಲ್ಲಿ ಶಾಸಕ ಸುನೀಲ್‌ಕುಮರ್‌, ಈ ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಸಿದೆ.

ADVERTISEMENT

ಹೇಳಿಕೆಗೆ ಈಗಲೂ ಬದ್ಧ: ಈ ಕುರಿತು ಉಡುಪಿಯಲ್ಲಿ ಮಂಗಳವಾರ ಪ್ರತಿಕ್ರಿಯಿಸಿರುವ ಸುನೀಲ್‌ಕುಮಾರ್‌, ‘ಕಲ್ಲಡ್ಕದಲ್ಲಿ ನೀಡಿದ ಹೇಳಿಕೆಗೆ ಈಗಲೂ ಬದ್ಧ. ಎಲ್ಲರೂ ಬೇಕು ಎಂದು ರೈ ಹೇಳಿದ್ದರೆ, ನಮ್ಮ ತಕರಾರು ಇರುತ್ತಿರಲಿಲ್ಲ. ಆದರೆ ಅವರು ಒಂದು ಸಮುದಾಯದಿಂದ ಗೆದ್ದಿದ್ದೇನೆ ಎಂದಿರುವುದು ಸರಿಯಲ್ಲ’ ಎಂದರು.

‘ಆರು ಬಾರಿ ಅಲ್ಲಾಹುವಿನ ಕೃಪೆಯಿಂದ ಗೆದ್ದಿದ್ದೇನೆ ಎಂದು ರಮಾನಾಥ ರೈ ಅವರು ಸ್ಪಷ್ಟವಾಗಿ ಹೇಳಿದ್ದರು. ಆದ್ದರಿಂದ ಆ ಕ್ಷೇತ್ರದ ಹಿಂದೂಗಳಿಗೆ ಅಪಮಾನವಾಗಿದೆ. ಅವರು ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಿದೆ. ಇನ್ನೂ ಹತ್ತು ಸಭೆಗಳಲ್ಲಿ ನಾನು ನನ್ನ ಹೇಳಿಕೆಯನ್ನು ನೀಡುತ್ತೇನೆ. ಅಧಿಕೃತವಾಗಿಯೇ ನಾನು ಮಾತನಾಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.