ADVERTISEMENT

ಕಸವಾಗಿ ಕಾಡುತ್ತಿರುವ ಖಾಲಿ ಸೈಟುಗಳು

ನಿರ್ವಹಣೆ ಇಲ್ಲದ ನಿವೇಶನಗಳು ಸ್ವಚ್ಛತೆಗೆ ಮಾರಕ

ಬಾಲಕೃಷ್ಣ
Published 30 ಜನವರಿ 2017, 6:16 IST
Last Updated 30 ಜನವರಿ 2017, 6:16 IST
ಕಸವಾಗಿ ಕಾಡುತ್ತಿರುವ ಖಾಲಿ ಸೈಟುಗಳು
ಕಸವಾಗಿ ಕಾಡುತ್ತಿರುವ ಖಾಲಿ ಸೈಟುಗಳು   

ದಾವಣಗೆರೆ:  ಸ್ಮಾರ್ಟ್‌ಸಿಟಿ ದಾವಣಗೆರೆಯಲ್ಲಿ ಇರುವ 1,34,618  ನಿವೇಶನಗಳಲ್ಲಿ 41 ಸಾವಿರಕ್ಕೂ ಅಧಿಕ ನಿವೇಶನಗಳು ಖಾಲಿ ಬಿದ್ದಿವೆ. ನಿರ್ವಹಣೆ ಇಲ್ಲದೆ ಇವು ಸ್ವಚ್ಛತೆಗೆ ಮಾರಕವಾಗಿ, ರೋಗ ಗಳಿಗೆ ಆಹ್ವಾನ ನೀಡುತ್ತಿವೆ. ಕಸ ಬಿಸಾಡುವವರಿಗೆ ಹೇಳಿ ಮಾಡಿಸಿ ದಂತಿವೆ. ಹಂದಿ, ಬೀಡಾಡಿ ದನಗಳಿಗೆ ವಿಶ್ರಾಂತಿಯ ತಾಣವಾಗಿವೆ.

ಇದು ನಗರದ ಒಂದು ವಾರ್ಡ್‌ಗೆ, ಒಂದು ಪ್ರದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ. 10 ವರ್ಷದ ಹಿಂದೆ ನಗರಸಭೆ ಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದಾಗ ಸೇರಿಸಿಕೊಂಡ ಎಲ್ಲ ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ. ಡಿಸಿಎಂ ಲೇಔಟ್‌, ಜಯನಗರ ಎ, ಬಿ, ಸಿ ಬ್ಲಾಕ್‌ಗಳು, ಶಕ್ತಿನಗರ, ಎಸ್‌.ಎಸ್‌. ಲೇಔಟ್‌ ಸೇರಿದಂತೆ ನಗರದ ಹೃದಯಭಾಗವನ್ನು ಸುತ್ತುವರಿದ ಪ್ರದೇಶಗಳನ್ನು ಈ ಸಮಸ್ಯೆ ಕಾಡುತ್ತಿದೆ.

ವಸತಿ, ವಾಣಿಜ್ಯ ಉದ್ದೇಶ ಮತ್ತು ಕೈಗಾರಿಕೆಗಳಿಗಾಗಿ ನಿವೇಶನಗಳನ್ನು ಕೊಂಡವರು ಅಲ್ಲಿ ಏನೂ ಮಾಡದೆ ಖಾಲಿ ಬಿಟ್ಟಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ವಸತಿಗಾಗಿ ಕೊಂಡವರದ್ದೇ ಇದರಲ್ಲಿ ಸಿಂಹಪಾಲು ಇದ್ದು, ಅಕ್ಕಪಕ್ಕದ ಮನೆಗಳ ನಡುವೆ ಉಳಿದಿರುವ ಈ ನಿವೇಶನಗಳು ಕಸ ಹಾಕುವ ಕೇಂದ್ರಗಳಾಗಿ ಮಾರ್ಪಾಡಾಗಿವೆ. ಕಸ ಇರುವಲ್ಲಿಯೇ ತನ್ನ ಆಹಾರ ಹುಡುಕುವ ಹಂದಿಗಳು ಸಹಜವಾಗಿ ಇಲ್ಲಿಗೆ ನುಗ್ಗುತ್ತವೆ. ನಿರ್ವಹಣೆ ಇಲ್ಲದೆ ಗಿಡಗಂಟಿಗಳೂ ಬೆಳೆಯುವುದರಿಂದ ಬೀಡಾಡಿ ದನಗಳು ಕೂಡ ಇಲ್ಲೇ ಬಂದು ತಿಂದು ಮಲಗುತ್ತವೆ.

ನಿವೇಶನ ಕೊಂಡವರೇ ಅವುಗಳನ್ನು ನಿರ್ವಹಣೆ ಮಾಡಬೇಕು ಎಂಬುದು ನಿಯಮ. ಆವರಣಗೋಡೆ ನಿರ್ಮಿಸಿ, ಆಗಾಗ ಸ್ವಚ್ಛಗೊ ಳಿಸಬೇಕು. ಆದರೆ ನಿವೇಶನ ಕೊಂಡವರು ಅತ್ತ ತಲೆ ಹಾಕುತ್ತಿಲ್ಲ. ಸಮಸ್ಯೆ ಸುತ್ತಲಿನವರಿಗೆ ಗಂಭೀರವಾಗಿ ಕಾಡಿದಾಗ ಮಾತ್ರ ಮಹಾನಗರ ಪಾಲಿಕೆಗೆ ದೂರು ಹೋಗುತ್ತದೆ. ಪರಿಸರ ಎಂಜಿನಿಯರಿಂಗ್‌ ವಿಭಾಗದಿಂದ ಸ್ವಚ್ಛಗೊಳಿಸಲಾಗುತ್ತದೆ. ನಿವೇಶ ನದ ಮಾಲೀಕರು ಯಾರು ಎಂಬುದು ಗೊತ್ತಾಗದೆ, ‘ಇಲ್ಲಿ ಕಸ ಹಾಕ ಬೇಡಿ’ ಎಂದು ಬೋರ್ಡ್‌ ಸಿಕ್ಕಿಸಿ ವಾಪಸ್ಸಾಗುತ್ತಿದ್ದಾರೆ. ಮಾಲೀಕರಿ ದ್ದರೆ ಈ ಸ್ವಚ್ಛತಾ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ.

ಸಾರ್ವಜನಿಕರ ಸಹಕಾರ ಅಗತ್ಯ
ಕಸ ಹಾಕುವುದು ಮಾತ್ರವಲ್ಲ, ಕಟ್ಟಡ ಕಟ್ಟುವಾಗ ಮಣ್ಣನ್ನು ಕೂಡ ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಖಾಲಿ ನಿವೇಶನವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಅನಗತ್ಯ ಮಣ್ಣನ್ನು ಎಲ್ಲೆಲ್ಲೋ ಸುರಿಯಬಾರದು. ಸಾರ್ವಜನಿಕರು ಸಹಕಾರ ನೀಡಬೇಕು ಎಂಬುದು   ಮೇಯರ್‌ ರೇಖಾ ನಾಗರಾಜ್‌ ಮನವಿಯಾಗಿದೆ.
ದಂಡ ವಿಧಿಸಲಾಗುವುದು
ಮಾಲೀಕರೇ ನಿವೇಶನಗಳನ್ನು ಸ್ವಚ್ಛವಾಗಿ ಟ್ಟುಕೊಳ್ಳಬೇಕು. ಅವರು ಎಲ್ಲಿರುತ್ತಾರೆ ಎಂಬುದು ಗೊತ್ತಾಗದೇ ಸಮಸ್ಯೆಯಾಗಿದೆ. ಮಾಲೀಕರು ತೆರಿಗೆ ಕಟ್ಟಲು ಬರುವಾಗ ದಂಡ ವಿಧಿಸುವುದಾಗಿ ಪ್ರಕಟಣೆ ನೀಡಿದ್ದೇವೆ’ ಎಂಬುದು ಕಂದಾಯ ವಿಭಾಗ ಉಪಾ ಯುಕ್ತ ರವೀಂದ್ರ ಮಲ್ಲಾಪುರ ಅವರ ಅಭಿಮತ.
ನಾವೇ ಸ್ವಚ್ಛಗೊಳಿಸುತ್ತೇವೆ
ಸಾರ್ವಜನಿಕರಿಂದ ದೂರು ಬಂದಾಗ ನಾವೇ ಹೋಗಿ ಸ್ವಚ್ಛಗೊಳಿಸಿ ಬರುತ್ತಿದ್ದೇವೆ. ಈಗ ಮನೆಮನೆಗೆ ಹೋಗಿ ಕಸ ಸಂಗ್ರಹ ಮಾಡುತ್ತಿರುವುದರಿಂದ ಕಸ ಸುರಿಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ತಿಮ್ಮಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT