ದಾವಣಗೆರೆ: ನಗರದ ಹಳೇ ಭಾಗದಲ್ಲಿನ ಕೊಳೆಗೇರಿಗಳಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೊಳೆಗೇರಿಗಳಲ್ಲಿನ ಜನರು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಭಾರತ್ ಕಾಲೊನಿಯ 1ನೇ ಕ್ರಾಸ್ನ ಕುಂಬಾರ ಓಣಿಯ ಬಳಿ 40 ಕುಟುಂಬಗಳು ವಾಸವಾಗಿದ್ದು, ಅವರಿಗೆ ಶೌಚಾಲಯಗಳಿಲ್ಲ. ಬಾಷಾ ನಗರದ 2ನೇ ಕ್ರಾಸ್ನಲ್ಲಿರುವ ನಿವಾಸಿಗಳಿಗೂ ಶೌಚಾಲಯಗಳಿಲ್ಲ.
ಇವರೆಲ್ಲರೂ ಬಯಲಲ್ಲೇ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಬಹಿರ್ದೆಸೆ ಸಮಯದಲ್ಲಿ ಮಹಿಳೆಯರಿಗೆ ಇಲ್ಲಿನ ಪುಡಾರಿ ಹುಡುಗರು ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಈ ಭಾಗದಲ್ಲಿನ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಸಂಚಾಲಕಿ ರೇಣುಕಾ ಯಲ್ಲಮ್ಮ ಆಗ್ರಹಿಸಿದರು.
ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ಅಧಿಕಾರಿ ಗಳು ಹೇಳುತ್ತಾರೆ.
ಆದರೆ, ಯಾವ ಕೊಳೆಗೇರಿ ಪ್ರದೇಶಗಳಲ್ಲಿಯೂ ಶೌಚಾ ಲಯಗಳ ಸೌಲಭ್ಯವಿಲ್ಲ. ಅಧಿಕಾರಿಗಳು ಸಭೆ ನಡೆಸಿ, ಅಗತ್ಯವಿರುವೆಡೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಬ್ಬೀರ್ ಸಾಬ್, ಮಂಜುನಾಥ, ರೆಹಮತ್ವುಲ್ಲಾ, ಸಾವಿತ್ರಮ್ಮ, ಹನುಮಂತಪ್ಪ, ಗೀತಮ್ಮ, ಸರೋಜಮ್ಮ, ಮೀನಾಕ್ಷಮ್ಮ, ಬಾಷಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.