ಬಸವಾಪಟ್ಟಣ: ಸುಮಾರು 500 ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಕುಡಿಯುವ ನೀರಿಗಾಗಿ ಚಿರಡೋಣಿ ಗ್ರಾಮದ ಹೃದಯ ಭಾಗದಲ್ಲಿ ನಿರ್ಮಿಸಿದ ಬೃಹತ್ ಬಾವಿಯನ್ನು ರಕ್ಷಿಸಿ ಎಲ್ಲರಿಗೂ ಶುದ್ಧ ನೀರು ದೊರಕಿಸುವಂತೆ ಇಲ್ಲಿನ ಗ್ರಾಮಸ್ಥರು ಜಿಲ್ಲಾಡಳಿಕ್ಕೆ ಒತ್ತಾಯಿಸಿದ್ದಾರೆ.
100 X 100 ಅಡಿ ಉದ್ದಗಲ, 80 ಅಡಿ ಆಳ ಹೊಂದಿರುವ ಬೃಹತ್ ಬಾವಿಯನ್ನು ಸ್ಥಳೀಯವಾಗಿ ದೊರೆಯುವ ಕಲ್ಲುಗಳಿಂದ ಹಿಂದಿನ ಕಾಲದಲ್ಲಿ ಹಿರಿಯರು ಭದ್ರವಾಗಿ ಕಟ್ಟಿದ್ದು, ಇಡೀ ಗ್ರಾಮಕ್ಕೆ ವರ್ಷಪೂರ್ತಿ ಕುಡಿಯುವ ನೀರು ಒದಗುವಂತೆ ಮಾಡಿದ್ದರು. ಪ್ರತಿಯೊಬ್ಬರೂ ಬಾವಿಗೆ ಇಳಿದು ನೀರು ತುಂಬಿಕೊಂಡು ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಬಾವಿಯ ಒಳಗೊಂದು ಬಾವಿ ಇರುವುದು ಇದರ ವಿಶೇಷ.
ಬಾವಿಯ ಎಲ್ಲಾ ಕಡೆಗಳಲ್ಲಿ ಈಗ ಗಿಡಗಂಟೆಗಳು ಬೆಳೆದಿವೆ. ಸುತ್ತಲೂ ನೂರಾರು ಮನೆಗಳು ಇದ್ದು, ಬಾವಿಯ ಅಂಚಿನಲ್ಲಿ ಗ್ರಾಮದ ರಸ್ತೆ ಹಾಯ್ದು ಹೋಗಿದೆ. ಬಾವಿಗೆ ರಕ್ಷಣಾ ಗೋಡೆ ಇಲ್ಲದೇ ಇರುವುದರಿಂದ ಜನ, ಜಾನುವಾರುಗಳು ಮತ್ತು ವಾಹನಗಳು ಬಾವಿಗೆ ಬೀಳುವ ಅಪಾಯವಿದೆ.
ಬಾವಿಯಲ್ಲಿ ಅನೇಕ ವರ್ಷಗಳಿಂದ ಹೂಳು ಮಣ್ಣು ತುಂಬಿರುವುದರಿಂದ ನೀರನ್ನು ಕುಡಿಯಲು ಆಗುತ್ತಿಲ್ಲ. ಎರಡು ವರ್ಷದ ಮಳೆ ಕೊರತೆಯಿಂದ ಬಾವಿಯಲ್ಲಿ ನೀರು ಸಂಗ್ರಹವಾಗಿಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಬಾವಿಯ ರಕ್ಷಣೆಗೆ ಕ್ರಮ ಕೈಗೊಂಡು ಗ್ರಾಮದ ಜನತೆಗೆ ನೀರನ್ನು ಒದಗಿಸುವ ಮೂಲಕ ಇದರ ಗತ ವೈಭವವನ್ನು ಮರಳಿ ತರಬೇಕೆಂದು ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಕೆ.ಆರ್.ರಂಗಪ್ಪ, ಯು.ರಾಯಪ್ಪ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.