ADVERTISEMENT

ಜನ–ಜಾನುವಾರಿಗೆ ಪ್ಲಾಸ್ಟಿಕ್‌ ಕಂಟಕ

ಜಾಗೃತಿ ಜಾಥಾದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:12 IST
Last Updated 16 ಫೆಬ್ರುವರಿ 2017, 5:12 IST
ದಾವಣಗೆರೆ: ವಿಷಕಾರಿ ಪ್ಲಾಸ್ಟಿಕ್ ಪದಾರ್ಥಗಳು ಜಾನುವಾರು ಹೊಟ್ಟೆ ಸೇರುತ್ತಿರುವ ಪರಿಣಾಮ ಅವು ಸಾವನ್ನಪ್ಪುತ್ತಿವೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
 
ನಗರದ ದುರ್ಗಾಂಬಿಕಾ ದೇವಸ್ಥಾನದ ಬಳಿ ಬುಧವಾರ ಕರುನಾಡ ಕನ್ನಡ ಸೇನೆ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಮಾರಕ ಪರಿಣಾಮ ಉಂಟಾಗು ತ್ತಿದೆ. ಜತೆಗೆ ಮನುಷ್ಯನ ಆರೋಗ್ಯವೂ ಹದಗೆಡುತ್ತಿದೆ. ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.
 
ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಪಿ.ಗೋಪಾಲಗೌಡ ಮಾತನಾಡಿ, ‘ಪ್ಲಾಸ್ಟಿಕ್ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದು, ಎಲ್ಲರೂ ಎಚ್ಚೆತ್ತು ಕೊಳ್ಳಬೇಕಾದ ಅಗತ್ಯವಿದೆ. ಪರಿಸರ ಕಾಳಜಿಗೆ ತುರ್ತು ಕ್ರಮ ತೆಗೆದುಕೊಳ್ಳದಿ ದ್ದರೆ ಭವಿಷ್ಯದಲ್ಲಿ ದುಬಾರಿ ಬೆಲೆ ತೆರ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.
 
‘ಪ್ಲಾಸ್ಟಿಕ್‌ ಭೂಮಿಯಲ್ಲಿ ಕೊಳೆಯುವುದಿಲ್ಲ. ನೀರನ್ನು ಭೂಮಿಯಲ್ಲಿ ಇಂಗಲು ಬಿಡುವುದಿಲ್ಲ. ಸುಟ್ಟರೂ ವಿಷಕಾರಿ ಅನಿಲ ವಾತಾವರಣ ಸೇರಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಪ್ಲಾಸ್ಟಿಕ್ ಚೀಲಗಳು ಚರಂಡಿಯಲ್ಲಿ ತುಂಬಿಕೊಂಡು ನಗರದಲ್ಲಿ ಸ್ವಚ್ಛತೆಯ ಸಮಸ್ಯೆ ಎದುರಾಗಲಿದೆ ಎಂದರು.
 
ಪಾಲಿಕೆ ಹಾಗೂ ಜಿಲ್ಲಾ ಡಳಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿ ಸಬೇಕು ಎಂದು ಒತ್ತಾಯಿಸಿದರು.  ಜಾಥಾ ದುರ್ಗಾಂಬಿಕಾ ದೇವಸ್ಥಾನದಿಂದ ಹೊರಟು, ಕಾಳಿಕಾದೇವಿ ರಸ್ತೆ, ವಿಜಯಲಕ್ಷ್ಮೀ ರಸ್ತೆ ಮಾರ್ಗವಾಗಿ ಗಡಿಯಾರ ಕಂಬ ತಲುಪಿ ಪ್ಲಾಸ್ಟಿಕ್‌ ಬಳಕೆಯ ವಿರುದ್ಧ ಜಾಗೃತಿ ಮೂಡಿಸಿತು.
 
ಪಾಲಿಕೆ ಸದಸ್ಯ ಚಂದ್ರಶೇಖರ್, ಪರಿಸರ ಹೋರಾಟಗಾರರಾದ ಗಿರೀಶ್ ದೇವರಮನಿ, ಎಂಜಿ.ಶ್ರೀಕಾಂತ್, ಸೇನೆಯ ಜಿಲ್ಲಾಧ್ಯಕ್ಷ ತಿರುಕಪ್ಪ, ಪಾಲಿಕೆ ಅಧಿಕಾರಿಗಳಾದ ಚಂದ್ರಶೇಖರ್ ಸುಂಕದ್, ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.