ADVERTISEMENT

‘ಮಕ್ಕಳ ಕಲಿಕಾ ಹಂತದಲ್ಲಿ ಸಮಸ್ಯೆ ಗುರುತಿಸಿ’

ಇಂಟ್ರಡಕ್ಷನ್‌ ಟು ಸ್ಕೂಲ್ ನ್ಯೂರೊ ಸೈಕಾಲಜಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 9:01 IST
Last Updated 12 ಫೆಬ್ರುವರಿ 2017, 9:01 IST
ದಾವಣಗೆರೆಯ ಸಂವೇದ ಶಿಕ್ಷಕರ ತರಬೇತಿ ಸಂಸ್ಥೆ ವತಿಯಿಂದ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ‘ಇಂಟ್ರಡಕ್ಷನ್‌ ಟು ಸ್ಕೂಲ್ ನ್ಯೂರೊ ಸೈಕಾಲಜಿ’ ಕಾರ್ಯಾಗಾರದಲ್ಲಿ ರಷ್ಯಾದ ಡಿಪಾರ್ಟ್‌ಮೆಂಟ್ ಆಫ್‌ ಎಜುಕೇಷನ್‌ನ ಡಾ.ರೊಮನೋವಾ ಆಂಟೋನಿನಾ ಮಾತನಾಡಿದರು.
ದಾವಣಗೆರೆಯ ಸಂವೇದ ಶಿಕ್ಷಕರ ತರಬೇತಿ ಸಂಸ್ಥೆ ವತಿಯಿಂದ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ‘ಇಂಟ್ರಡಕ್ಷನ್‌ ಟು ಸ್ಕೂಲ್ ನ್ಯೂರೊ ಸೈಕಾಲಜಿ’ ಕಾರ್ಯಾಗಾರದಲ್ಲಿ ರಷ್ಯಾದ ಡಿಪಾರ್ಟ್‌ಮೆಂಟ್ ಆಫ್‌ ಎಜುಕೇಷನ್‌ನ ಡಾ.ರೊಮನೋವಾ ಆಂಟೋನಿನಾ ಮಾತನಾಡಿದರು.   

ದಾವಣಗೆರೆ:  ಮಕ್ಕಳ ಕಲಿಕಾ ಹಂತದಲ್ಲಿ ಸಮಸ್ಯೆಗಳು ಕಂಡುಬಂದರೆ ಪೋಷಕರು ನಿರ್ಲಕ್ಷ್ಯ ವಹಿಸದೇಸ ತಜ್ಞ ನ್ಯೂರೊ ಸೈಕಾಲಜಿಸ್ಟ್‌ಗಳ ಬಳಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರಷ್ಯಾದ ಡಿಪಾರ್ಟ್‌ಮೆಂಟ್ ಆಫ್‌ ಎಜುಕೇಷನ್‌ನ ಡಾ.ರೊಮನೋವಾ ಆಂಟೋನಿನಾ ಸಲಹೆ ನೀಡಿದರು.

ನಗರದ ಸಂವೇದ ಶಿಕ್ಷಕರ ತರಬೇತಿ ಸಂಸ್ಥೆಯು ಶನಿವಾರ ಸಂಸ್ಥೆಯ ಸಭಾಂ ಗಣದಲ್ಲಿ ಆಯೋಜಿಸಿದ್ದ ‘ಇಂಟ್ರಡಕ್ಷನ್‌ ಟು ಸ್ಕೂಲ್ ನ್ಯೂರೊ ಸೈಕಾಲಜಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಿದುಳಿನ ಬೆಳವಣಿಗೆ ಹಾಗೂ ಕಾರ್ಯವೈಖರಿಯನ್ನು 3 ಹಂತಗಳಲ್ಲಿ ವಿಂಗಡಿಸಲಾಗುತ್ತದೆ. ಒಂದು ಹಂತದಲ್ಲಿ ಸಮಸ್ಯೆ ಎದುರಾದರೂ ಮಕ್ಕಳಲ್ಲಿ ಕಲಿಕಾ ನ್ಯೂನತೆ ಹಾಗೂ ವರ್ತನಾ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಮಕ್ಕಳಲ್ಲಿ ಅಪೂರ್ಣ ಮಿದುಳಿನ ಬೆಳವಣಿಗೆ ಯಿಂದ ತೀವ್ರತೆರನಾದ ಸಮಸ್ಯೆಗಳು ಬಾಧಿಸುತ್ತವೆ. ಇಂತಹ ಸಂದರ್ಭ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದರು.

ಮಕ್ಕಳ ಕಲಿಕಾ ನ್ಯೂನತೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಓದು, ಬರಹ, ಗ್ರಹಿಕೆ, ವರ್ತನೆ ಹೀಗೆ ಮಕ್ಕಳು ಯಾವ ಹಂತದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗುರುತಿಸಿ ಪೋಷಕರಿಗೆ ತಿಳಿಸಬೇಕು, ಆರಂಭ ದಲ್ಲೇ ಮಿದುಳಿನ ಬೆಳವಣಿಗೆಯ ದೋಷ ಕಂಡುಹಿಡಿದು ಚಿಕಿತ್ಸೆ ನೀಡಿದರೆ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದರು.

ಸಂವೇದ ಶಿಕ್ಷಕರ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಡಾ.ಸುರೇಂದ್ರನಾಥ ಪಿ.ನಿಶಾನಿ ಮಠ್ ಮಾತನಾಡಿ, ‘ಕಲಿಕಾ ಹಂತದಲ್ಲೇ ಮಕ್ಕಳ ನ್ಯೂನತೆ ಗುರುತಿಸದ ಪರಿಣಾಮ ನೂರಾರು ಮಕ್ಕಳ ಭವಿಷ್ಯ ಕಮರಿ ಹೋಗುತ್ತಿದೆ. ಪೋಷಕರ ಹಾಗೂ ಶಿಕ್ಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ.
ಈ ನಿಟ್ಟಿನಲ್ಲಿ ಸಂವೇದ ಶಿಕ್ಷಕರ ತರಬೇತಿ ಸಂಸ್ಥೆ 2 ದಶಕಗಳಿಂದ ಶಿಕ್ಷಕ ರಿಗೆ ತರಬೇತಿ ನೀಡುತ್ತಿದ್ದು , ನೂರಾರು ಕಾರ್ಯಾಗಾರ ನಡೆಸಿದೆ ಎಂದರು.

‘ನಮ್ಮ ದೇಶದಲ್ಲಿ ಪೂರ್ವ ಪ್ರಾಥ ಮಿಕ ಹಂತದ ಶಿಕ್ಷಣವನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದ್ದು, ಉನ್ನತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಗತ್ತಿನ ಶ್ರೇಷ್ಠ ನ್ಯೂರೊ ಸೈಕಾಲಜಿಸ್ಟ್‌ಗಳಾದ ಅಲೆಕ್ಸಾಂಡರ್ ಲೂರಿಯಾ ಮತ್ತು ಲಿವ್ ವೆಗಾಟ್ಸಕಿ ಅವರು ಮಿದುಳಿನ ರಚನೆ, ಕಾರ್ಯವೈಖರಿ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಮಕ್ಕಳ ಕಲಿಕಾ ನ್ಯೂನತೆ ಗುರುತಿಸುವಿಕೆ ಹಾಗೂ ಪರಿಹಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಅವರ ತತ್ವಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.