ಮಲೇಬೆನ್ನೂರು: ಪಟ್ಟಣದಲ್ಲಿ ಗುರುವಾರ ಗುಡುಗು ಸಿಡಿಲು ಸಹಿತ ಬಿರು ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಮಳೆ ನೀರು ಪ್ರವಾಹದಂತೆ ಪಶ್ಚಿಮ ಭಾಗದಿಂದ ಹರಿದು ಹಳೆ ಕೆರೆಮೈದಾನ ತುಂಬಿ, ಜಿಬಿಎಂಎಸ್ ಫಾರಂ, ಪುರಸಭೆ ಕಚೇರಿ ಕಡೆಗೆ ನುಗ್ಗಿತು. ಬಸ್ನಿಲ್ದಾಣದ ಹಿಂಭಾಗದ ರಾಜಕಾಲುವೆ ಉಕ್ಕಿ ಹರಿಯಿತು.
ಪುರಸಭೆ ಕಚೇರಿ ಒಳಗೆ ಅರ್ಧ ಅಡಿ ನೀರು ನಿಂತಿತ್ತು. ಮಳೆಯ ಬಳಿಕ ಸಿಬ್ಬಂದಿ ನೀರನ್ನು ಹೊರ ಹಾಕುತ್ತಿರುವ ದೃಶ್ಯ ಕಂಡು ಬಂತು. ಮೋರಿಗಳು ಉಕ್ಕಿ ಹರಿದವು. ಮೋರಿಯ ಮೇಲ್ಭಾಗದಲ್ಲಿ ಅಳವಡಿಸಿದ್ದ ಪಾದಚಾರಿ ಕಲ್ಲುಗಳು ಕೆಲವೆಡೆ ಕಿತ್ತು ಹೋದವು. ರಾಜ್ಯ ಹೆದ್ದಾರಿ – 25ರ ಮೇಲೆ ಕೆಲ ಕಾಲ ಮಳೆ ನೀರು ಉಕ್ಕಿ ಹರಿಯಿತು.
ಗುರುವಾರದ ಸಂತೆ ಅಸ್ತವ್ಯಸ್ತಗೊಂಡಿತು. ಸಂತೆಗೆ ಬಂದಿದ್ದ ವ್ಯಾಪಾರಿಗಳು ಮಳೆಗೆ ಹಿಡಿಶಾಪ ಹಾಕುತ್ತು ಕಡಿಮೆ ಬೆಲೆಗೆ ತರಕಾರಿ ಮಾರಿದರು.
ಸುತ್ತಲಿನ ಗ್ರಾಮೀಣ ಭಾಗದಲ್ಲೂ ತುಂತುರು ಜಡಿ ಮಳೆ ಬಂದಿದೆ. ಜಿಗಳಿ, ಕುಂಬಳೂರು, ಯಲವಟ್ಟಿ, ಕೊಕ್ಕನೂರು ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಮಳೆಯಿಂದಾಗಿ ಖುಷ್ಕಿ ಬೆಳೆಗಳಾದ ಜೋಳ, ಮೆಕ್ಕೆಜೋಳ ಮತ್ತು ತೋಟದ ಬೆಳೆಗಳಿಗೆ ಅನುಕೂಲವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು. ಕೆಲ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.