ADVERTISEMENT

ಮೌಢ್ಯದ ವಿರುದ್ಧ ಜಾಗೃತಿ: ಸತೀಶ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 5:51 IST
Last Updated 22 ಸೆಪ್ಟೆಂಬರ್ 2014, 5:51 IST

ದಾವಣಗೆರೆ: ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಇದೇ ವರ್ಷ ಡಿ. 6ರಂದು ಬೆಳಗಾವಿ ಸ್ಮಶಾನದಲ್ಲಿ ವಿನೂತನ
ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲಿ ಚಿಂತನಾ– ಮಂಥನಾ ನಡೆಯಲಿದೆ ಎಂದು ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದಲಿತರು ಆರ್ಥಿಕವಾಗಿ ಇನ್ನೂ ಸಬಲರಾಗಿಲ್ಲ. ಅದಕ್ಕೆ ಅವರಲ್ಲಿರುವ ಮೌಢ್ಯತೆಯೇ ಕಾರಣ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮೊದಲು ಮೌಢ್ಯದಿಂದ ಹೊರಬರಬೇಕು. ಅದೇ ಉದ್ದೇಶದಿಂದ ಡಿ. ೬ರಂದು ಬೆಳಗಾವಿ ಸ್ಮಶಾನದಲ್ಲಿ ಚಿಂತನಾ ಸಭೆ ಏರ್ಪಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಆಶಯ, ಅವರ ಚಿಂತನೆಗಳ ಹಾದಿಯಲ್ಲಿ ನಡೆಯುವವರು ಈ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಕರೆ ನೀಡಿದರು.

ದಲಿತ ಸಮುದಾಯ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು. ಆ ನಿಟ್ಟಿನಲ್ಲಿ ಸರ್ಕಾರವೂ ಎಲ್ಲ ಸೌಲಭ್ಯ
ಕಲ್ಪಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ದಲಿತರಿಗಾಗಿ ಸಾಕಷ್ಟು  ಸೌಲಭ್ಯಗಳನ್ನು ಕೊಡುತ್ತಿದೆ. ಆದರೆ, ಅವರು ಮುಖ್ಯವಾಹಿನಿಗೆ ಬಾರದೇ ಇರುವುದು ದುರಂತ ಎಂದು ಹೇಳಿದರು.

ಸೌಲಭ್ಯ ಪಡೆದವರೇ ಮತ್ತೆ ಸೌಲಭ್ಯ ಪಡೆಯುವುದರಿಂದ ಎಲ್ಲರಿಗೂ ಸೌಲಭ್ಯ ತಲುಪುತ್ತಿಲ್ಲ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ತಲುಪಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ. ಇತ್ತೀಚೆಗೆ ದಲಿತ ಸಮುದಾಯದ ಕೆಲವರು ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಇದು ಆಗಬಾರದು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.