ADVERTISEMENT

ಯುಜಿಡಿ ಕಾಮಗಾರಿ ತಡೆದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮೇ 2017, 4:53 IST
Last Updated 19 ಮೇ 2017, 4:53 IST

ಹರಿಹರ: ಇಲ್ಲಿನ ಕಾಳಿದಾಸ ನಗರದ ನೂರಾನಿ ಆಟೊ ನಿಲ್ದಾಣದ ಬಳಿ ಮೂರನೇ ಮುಖ್ಯರಸ್ತೆಯಲ್ಲಿ ಗುರುವಾರ ಸಿಮೆಂಟ್ ಹಾಗೂ ಜಲ್ಲಿ ಬಳಸದೇ ನಡೆಯುತ್ತಿದ್ದ ಒಳಚರಂಡಿ ಕಾಮಗಾರಿಯನ್ನು ತಡೆದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದರು.

ಒಳಚರಂಡಿಗೆ ಮನೆಗಳ ಪೈಪ್‌ಗಳನ್ನು ಅಳವಡಿಸಲು ನಿರ್ಮಿಸಲಾಗಿರುವ ಛೇಂಬರ್‌ಗಳು ಕಿರಿದಾಗಿದ್ದು, ಕಳಪೆಯಾಗಿವೆ. ಇವುಗಳಿಗೆ ಅಳವಡಿಸಿರುವ ಕಾಂಕ್ರೀಟ್ ರಿಂಗ್‌ಗೆ ಜಲ್ಲಿ  ಹಾಗೂ ಸಿಮೆಂಟ್ ಬಳಸಿಲ್ಲ. ಕೇವಲ ಎಂ–ಸ್ಯಾಂಡ್ ತುಂಬಿ ಅದರ ಮೇಲೆ ಮಡ್ಡಿ ಸಾರಿಸುತ್ತಿದ್ದರು.

ಇದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ ಗುತ್ತಿಗೆದಾರರು, ‘ಜಲ್ಲಿ ಸಿಮೆಂಟ್ ತಂದುಕೊಡದಿದ್ದರೆ ನಾವೇನು ಮಾಡಲು ಸಾಧ್ಯ. ಇರುವುದನ್ನು ಬಳಸಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಇದರಿಂದ ಕೋಪಗೊಂಡ ಸಾರ್ವಜನಿಕರು ಸ್ಥಳಕ್ಕೆ ಕಾಮಗಾರಿ ಎಂಜಿನಿಯರ್ ಬರುವವರೆಗೆ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದ ನಡೆದಿದ್ದು, ಕಾರ್ಮಿಕರು ಸ್ಥಳದಿಂದ ಜಾಗ ಖಾಲಿ ಮಾಡಿದರು.

ಈ ಬಗ್ಗೆ ನಗರಸಭೆಗೆ ದೂರು ನೀಡಿದ್ದರೂ ಕಾಮಗಾರಿಗೆ ಸಂಬಂಧಿಸಿದ ಒಬ್ಬ ಎಂಜಿನಿಯರ್  ಕೂಡ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ದೂರಿದರು.
ಗುಣಮಟ್ಟದ ವಸ್ತುಗಳನ್ನು ಬಳಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.