ಹೊನ್ನಾಳಿ : ಸರ್ಕಾರಗಳು ರೈತ ದಿನಾಚರಣೆ ಆಚರಿಸಿದರೆ ಸಾಲದು, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಮೂಲಕ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಜಗದೀಶ್ ಕಡದಕಟ್ಟೆ ಹೇಳಿದರು. ತಾಲ್ಲೂಕಿನ ಎಚ್.ಕಡದಕಟ್ಟೆ ಸಮೀಪದಲ್ಲಿರುವ ಎಚ್.ಎಸ್. ರುದ್ರಪ್ಪ ಅವರ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.
ರೈತರಿಗೆ ಅನುಕೂಲವಾಗುವ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು. ಕೆರೆಗಳಿಗೆ ನೀರು ತುಂಬಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಕೆಲಸಕ್ಕೆ ಸರ್ಕಾರಗಳು ಮುಂದಾಗಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಇತ್ತೀಚೆಗೆ ಕೇಂದ್ರ ಸರ್ಕಾರ ರೈತರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕೊಡಲು ನಿರಾಕರಿಸಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡಿ ತೋರಿಸುತ್ತಿದೆ. ಈ ಸರ್ಕಾರಗಳಿಂದ ಬೆಂಬಲ ಬೆಲೆ ನಿರೀಕ್ಷೆ ಮಾಡುವುದು ತಪ್ಪೇ. ನಷ್ಟಕ್ಕೊಳಗಾದ ರೈತ ಪರಿಹಾರ ಅಥವಾ ಬೆಂಬಲ ಬೆಲೆ ಕೇಳುವುದು ಆತನ ಹಕ್ಕಲ್ಲವೇ ಎಂದು ಪ್ರಶ್ನಿಸಿದರು.
ಶ್ರೀ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೇವಲ ರೈತ ದಿನಾಚರಣೆ ಮಾಡದೇ ಆತನ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು. ರೈತಸಂಘದ ಪದಾಧಿಕಾರಿಗಳಾದ ಬಲಮುರಿ ವೀರಭದ್ರಯ್ಯ, ಸಂತೋಷ್, ಕತ್ತಿಗೆ ಸಿದ್ದೇಶ್, ಫಾಲಾಕ್ಷಪ್ಪ, ಗಜೇಂದ್ರಪ್ಪ, ಗುಡ್ಡೇಹಳ್ಳಿ ಪರಮೇಶ್ವರ್, ವೀರೇಶ್, ದಾದಾಪೀರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.