ದಾವಣಗೆರೆ: ಸ್ವಾತಂತ್ರ್ಯ ನಂತರ ಸುದೀರ್ಘ ಅವಧಿ ಆಡಳಿತ ಚುಕ್ಕಾಣಿ ಹಿಡಿದರೂ ದೇಶದ ಅಭಿವೃದ್ಧಿ ಮಾಡಲಾಗದ ಕಾಂಗ್ರೆಸ್ಗೆ ಜನರು ತಕ್ಕಪಾಠ ಕಲಿಸಲಿದ್ದಾರೆ. ಚುನಾವಣೆಯ ನಂತರ ಕುಟುಂಬ ರಾಜಕಾರಣಕ್ಕೆ ತೆರೆಬೀಳಲಿದೆ ಎಂದು ಬಿಜೆಪಿ ಮುಖಂಡ ಕೃಷಿಕ ಮಂಜುನಾಥ್ ಪಟೇಲ್ ಭವಿಷ್ಯ ನುಡಿದರು.
ಜಿಲ್ಲೆಯಲ್ಲೂ ಕಾಂಗ್ರೆಸ್ ರಾಜಕಾರಣ ಒಂದು ಕುಟುಂಬಕಷ್ಟೇ ಸೀಮಿತವಾಗಿದೆ. ಅಪ್ಪ ಶಾಮನೂರು ಜಿಲ್ಲಾ ಉಸ್ತುವಾರಿ ಸಚಿವ, ಮಗ ಶಾಸಕ. ಆದರೂ, ಅವರಿಗೇ ಟಿಕೆಟ್ ನೀಡಲಾಗಿದೆ. ಅವರು ಗೆದ್ದರೆ ಉತ್ತರ ಕ್ಷೇತ್ರಕ್ಕೆ ಮತ್ತೆ ಉಪ ಚುನಾವಣೆ ನಡೆಯಲಿದೆ. ಅವರ ಪತ್ನಿಯನ್ನು ನಿಲ್ಲಿಸುವ ಹುನ್ನಾರ ಅದರ ಹಿಂದಿದೆ. ಹಾಗಾಗಿ, ಜನರು ಕಾಂಗ್ರೆಸ್ ಬೆಂಬಲಿಸಬಾರದು ಎಂದು ಕೋರಿದರು.
2013ರ ಚುನಾವಣೆಯಲ್ಲಿ ಬಿಜೆಪಿಯ ಮತ ವಿಭಜನೆ ಆಗಿದ್ದರಿಂದ ಕಾಂಗ್ರೆಸ್ ಜಿಲ್ಲೆಯಲ್ಲಿ ಗೆಲುವು ಸಾಧಿಸಿತು. ಈಗ ಬಿಜೆಪಿ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಒಟ್ಟಾಗಿರುವ ಕಾರಣ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಕೆಲವರು ಪುಸಲಾಯಿಸಿ ಮಹಿಮ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಮೊದಲು ಜೆಡಿಎಸ್ ವಿರೋಧಿಸಿ, ಸ್ವಂತ ಪಕ್ಷ ಸ್ಥಾಪಿಸಿ, ನಂತರ ಕಾಂಗ್ರೆಸ್ ಸೇರಿ, ಈಗ ಟಿಕೆಟ್ ಸಿಗಲಿಲ್ಲ ಎಂದು ಈಗ ಮತ್ತೆ ಜೆಡಿಎಸ್ನಿಂದ ಸ್ಪರ್ಧಿಸಿರುವ ಮಹಿಮ ಪಟೇಲ್ ಅವರನ್ನು ಜನರು ನಂಬುವುದಿಲ್ಲ. ದೇವೇಗೌಡರ ಕುತಂತ್ರ ಅರಿತ ಜನ ಅವರ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದರು.
ಎರಡು ಬಾರಿ ಸಂಸದರಾಗಿ, ಜನರ ಜತೆ ಬೆರೆಯುವ ಸಿದ್ದೇಶ್ವರ ಅವರಿಗೆ ಈ ಬಾರಿ ಜನರು ಮನ್ನಣೆ ನೀಡಲಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.