ADVERTISEMENT

ಜಿಲ್ಲೆಗೆ ನಾಳೆ ಬಿಎಸ್‌ವೈ ಭೇಟಿ; ದಲಿತರ ಮನೆಯಲ್ಲಿ ಉಪಾಹಾರ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:13 IST
Last Updated 24 ಮೇ 2017, 9:13 IST

ಹುಬ್ಬಳ್ಳಿ: ‘ಜನಸಂಪರ್ಕ ಅಭಿಯಾನದ ಅಂಗವಾಗಿ ಇದೇ 25ರಂದು ಜಿಲ್ಲೆಗೆ ಭೇಟಿ ನೀಡಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಕೆ.ಬಿ. ನಗರದ ದಲಿತ ಸಮುದಾಯದ ರೇಣಕಪ್ಪ ಕೇಲೂರ ಅವರ ಮನೆಯಲ್ಲಿ ಉಪಾಹಾರ ಸೇವಿಸಲಿದ್ದಾರೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಮಾ. ನಾಗರಾಜ ತಿಳಿಸಿದರು.

‘ಇಲ್ಲಿಯವರೆಗೂ ಕಾಂಗ್ರೆಸ್‌ ಪಕ್ಷ ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿದೆ. ಆದರೆ, ಅವರ ಉದ್ಧಾರ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿಯೇ ಯಡಿಯೂರಪ್ಪ ಅವರು ದಲಿತರ ಕೇರಿಗೆ ಹೋದಾಗಲೆಲ್ಲ ಸಾವಿರಾರು ದಲಿತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದಲಿತರ ಮನೆಯಲ್ಲಿ ಉಪಾ ಹಾರ ಮಾಡು ತ್ತಿರುವ ಯಡಿಯೂರಪ್ಪ ಅವರ ಬಗ್ಗೆ ವಿರೋಧಿಗಳು ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಗಮನ ಕೊಡದೇ ದಲಿತರ ಸಮಸ್ಯೆಗಳನ್ನು ಪರಿಹರಿಸಲು ಅವರು ಬದ್ಧರಾಗಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

‘25ರಂದು ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿಯ ಸರ್ಕಿಟ್‌ ಹೌಸ್‌ನಲ್ಲಿ ಬಿಜೆಪಿ ಮುಖಂಡರ ಸಭೆ ನಡೆಸಲಿರುವ ಯಡಿಯೂರಪ್ಪ, 9.30ಕ್ಕೆ ಕೆ.ಬಿ. ನಗರದ ಕೇಲೂರ ಅವರ ಮನೆಯಲ್ಲಿ ಉಪಾಹಾರ ಸೇವಿಸುವರು. 11.30ಕ್ಕೆ ಗೋಕುಲ ಗಾರ್ಡನ್‌ನಲ್ಲಿ ಎರಡು ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಂಜೆ 4ಕ್ಕೆ ಬರ ವೀಕ್ಷಣೆ ಕಾರ್ಯಕ್ರಮದ ಅಂಗವಾಗಿ ಕಲಘಟಗಿ ತಾಲ್ಲೂಕಿನ ಧುಮ್ಮವಾಡ ಕೆರೆ ವೀಕ್ಷಿಸಲಿದ್ದಾರೆ. ಸಂಜೆ 5.30ಕ್ಕೆ ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವರು’ ಎಂದರು.

‘ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಗನನ್ನು ಸಚಿವರನ್ನಾಗಿ ಮಾಡಿದ್ದು ಹೊರತುಪಡಿಸಿ ಬೇರೆ ಯಾವ ದಲಿತರಿಗೂ ಸಹಾಯ ಮಾಡಿಲ್ಲ. ಹೀಗಾಗಿ, ಬಿಜೆಪಿ ಮುಖಂಡರ ಬಗ್ಗೆ ಟೀಕಿಸುವ ಹಕ್ಕು ಅವರಿಗಿಲ್ಲ’ ಎಂದರು.

ಪಕ್ಷದ ವಿಭಾಗ ಪ್ರಭಾರ ಮಹೇಶ ಟೆಂಗಿನಕಾಯಿ, ಪಕ್ಷದ ಹುಬ್ಬಳ್ಳಿ–ಧಾರವಾಡ ಮಹಾನಗರ ಅಧ್ಯಕ್ಷ ನಾಗೇಶ ಕಲಬುರ್ಗಿ, ಗ್ರಾಮೀಣ ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.